ಸುದ್ದಿ 

ಚಿಕ್ಕಮಗಳೂರು: ದತ್ತ‌ ಜಯಂತಿ ಬ್ಯಾನರ್‌ ವಿವಾದ ರಣರಂಗಕ್ಕೆ – ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ..

Taluknewsmedia.com

ಚಿಕ್ಕಮಗಳೂರು: ದತ್ತ‌ ಜಯಂತಿ ಬ್ಯಾನರ್‌ ವಿವಾದ ರಣರಂಗಕ್ಕೆ – ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ..

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣವು ಬುಧವಾರ ರಾತ್ರಿ ತೀವ್ರ ಉದ್ವಿಗ್ನತೆಯಿಂದ ಕಂಗಾಲಾಗಿತ್ತು. ದತ್ತ ಜಯಂತಿ ಬ್ಯಾನರ್‌ ತೆರವು ವಿಚಾರದಲ್ಲಿ ಆರಂಭವಾದ ಸಣ್ಣ ಗಲಾಟೆ, ಕೊನೆಗೆ ಘೋರ ಅಪರಾಧಕ್ಕೆ ತಿರುಗಿ ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ (40) ಅವರ ನಿಷ್ಠುರ ಹತ್ಯೆಗೆ ಕಾರಣವಾಗಿದೆ.

ಬಜರಂಗ ದಳ ಕಾರ್ಯಕರ್ತರೇ ಆರೋಪಿಗಳು?

ಪ್ರಾಥಮಿಕ ತನಿಖೆ ಪ್ರಕಾರ ಸಂಜಯ್ ಮತ್ತು ಮಿಥುನ್ ಎಂಬ ಯುವಕರು ಮಚ್ಚಿನಿಂದ ಗಣೇಶ್ ಮೇಲೆ ದಾಳಿ ನಡೆಸಿ ಸ್ಥಳದಲ್ಲೇ ಕೊಲೆ ಮಾಡಿದ್ದಾರೆ. ಇಬ್ಬರೂ ಬಜರಂಗ ದಳಕ್ಕೆ ಸಂಬಂಧಿಸಿದವರಾಗಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಈಗಾಗಲೇ ಐವರನ್ನು ವಶಕ್ಕೆ ಪಡೆದಿದ್ದಾರೆ. ಗಲಾಟೆಯಲ್ಲಿ ಆರೋಪಿ ಸಂಜಯ್ ತೀವ್ರವಾಗಿ ಗಾಯಗೊಂಡಿದ್ದು, ಚಿಕ್ಕಮಗಳೂರಿನ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಣೇಶ್ ಅವರು ಸಖರಾಯಪಟ್ಟಣ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದು, ಸ್ಥಳೀಯ ರಾಜಕೀಯದಲ್ಲಿ ಸಕ್ರಿಯರಾಗಿದ್ದರು.

ದಾಳಿ ಹೇಗೆ ನಡೆಯಿತು?..

ಘಟನೆಯ ಸಮಯದಲ್ಲಿ ಗಣೇಶ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಕಲ್ಮರಡಿ ಮಠದ ಸಮೀಪದ ಕಿರಿದಾದ ರಸ್ತೆಯಲ್ಲಿ ಬೈಕ್‌ನಲ್ಲಿ ಬಂದ ಆರೋಪಿಗಳು ಕಾರನ್ನು ಅಡ್ಡಗಟ್ಟಿ, ಮಚ್ಚುಗಳಿಂದ ಕ್ರೂರ ಹಲ್ಲೆ ನಡೆಸಿದ್ದಾರೆ. ನಂತರ ಹಂತಕರು ಮಚ್ಚುಗಳನ್ನು ಅಲ್ಲೇ ಬಿಸಾಡಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಮಚ್ಚು ಸೇರಿದಂತೆ ಕೆಲವು ಪುರಾವೆಗಳನ್ನು ವಶಪಡಿಸಿಕೊಂಡಿದ್ದಾರೆ.

ಶಾಂತಿ ಕಾಪಾಡಲು ಭದ್ರತೆ ಹೆಚ್ಚಿಸಿದ ಪೊಲೀಸರು

ಘಟನೆ ನಂತರ ಸಖರಾಯಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಹೆಚ್ಚುವರಿ ಪೊಲೀಸ್ ಪಡೆ ನಿಯೋಜಿಸಲಾಗಿದೆ. ಆರೋಪಿಗಳ ಪತ್ತೆ ಮತ್ತು ಬಂಧನಕ್ಕಾಗಿ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಚಿಕ್ಕಮಗಳೂರು ಎಸ್‌ಪಿ ವಿಕ್ರಮ್ ಆಮ್ಟೆ ತಿಳಿಸಿದ್ದಾರೆ.

ಮೃತ ಗಣೇಶ್ ಅವರ ಶವ ಸಾಗರಕ್ಕೆ ಭೇಟಿ ನೀಡಿದ ಶಾಸಕ ಆನಂದ್, “ಬ್ಯಾನರ್ ತೆರವು ವಿಚಾರವಾಗಿ ಆರಂಭವಾದ ಕಲಹವನ್ನು ಪೊಲೀಸರು ಮೊದಲಿನಿಂದಲೇ ಗಂಭೀರವಾಗಿ ತೆಗೆದುಕೊಂಡಿದ್ದರೆ ಈ ದುರಂತ ತಪ್ಪಿಸಬಹುದಾಗಿತ್ತು. ಸುಮಾರು 8 ಮಂದಿ ಈ ಘಟನೆಯಲ್ಲಿ ಶಾಮೀಲಾಗಿರುವ ಶಂಕೆ ಇದೆ,” ಎಂದು ಆರೋಪಿಸಿದ್ದಾರೆ. ಪ್ರಮುಖ ಆರೋಪಿ ಗೆರೆಸೇರಿ ಬಜರಂಗ ದಳಕ್ಕೆ ಸಂಬಂಧಿಸಿದ ಸಂಜಯ್, ನಿತಿನ್, ನಾಗಭೂಷಣ್, ದರ್ಶನ್, ಅಜಯ್ ಸೇರಿ ಆರು ಮಂದರ ವಿರುದ್ಧ ಪ್ರಕರಣ ದಾಖಲಾಗಿದೆ.

ಸದ್ಯ ಸಂಜಯ್, ನಾಗಭೂಷಣ್ ಸೇರಿದಂತೆ ಐವರು ಬಂಧಿತರಾಗಿದ್ದು, ಮಿಥುನ್‌ರಿಂದ ಪೊಲೀಸರು ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.

Related posts