ಬಾಗಲೂರು: ಮನೆ ಹಕ್ಕು ತಕರಾರು – ಕುಟುಂಬಕ್ಕೆ ಜೀವ ಬೆದರಿಕೆ, ಮನೆ ನೆಲಸಮ
ಬೆಂಗಳೂರು 21 ಆಗಸ್ಟ್ 2025
ಬಾಗಲೂರು ಗ್ರಾಮದಲ್ಲಿ ಆಸ್ತಿ ಹಕ್ಕು ಹಂಚಿಕೆ ವಿಚಾರದಲ್ಲಿ ಉಂಟಾದ ತಕರಾರು ತೀವ್ರ ಗಲಾಟೆಗೆ ತಿರುಗಿ, ಮನೆಯನ್ನೇ ನೆಲಸಮ ಮಾಡುವ ಮಟ್ಟಿಗೆ ಪ್ರಕರಣ ತಲುಪಿದೆ.
ದಿವಂಗತ ಮುನಿಕೃಷ್ಣಪ್ಪ ಅವರ ಪತ್ನಿ ಮೀನಾಕ್ಷಿ ಅವರು ಬಾಗಲೂರು ಪೊಲೀಸ್ ಠಾಣೆಗೆ ನೀಡಿದ ದೂರಿನ ಪ್ರಕಾರ – ತಮ್ಮ ಪತಿಯ ಮರಣದ ಬಳಿಕ ಕುಟುಂಬವು 30 ವರ್ಷಗಳಿಂದ ಬಾಗಲೂರಿನಲ್ಲಿರುವ ಸೈಟಿನಲ್ಲಿ ವಾಸಿಸುತ್ತಿತ್ತು. ಈ ನಡುವೆ ಸಾಲಕ್ಕಾಗಿ ಮನೆಯ ದಾಖಲೆಗಳನ್ನು ರಂಗಪ್ಪ ಎಂಬವರ ಬಳಿ ಇಡಲಾಗಿತ್ತು. ನಂತರ ದಾಖಲೆಗಳು ಸಂಬಂಧಿಯಾದ ಸುರೇಶ್ ಅವರ ಕೈಗೆ ಹೋಗಿದ್ದು, ಅವರು ದಾಖಲೆಗಳನ್ನು ಮರಳಿ ನೀಡದೇ, “ನಿಮ್ಮ ಹೆಸರಿನಲ್ಲಿ ₹2.60 ಲಕ್ಷ ಸಾಲವಿದೆ” ಎಂದು ಹೇಳಿಕೊಂಡಿದ್ದಾರೆ. ಬಳಿಕ ಸುರೇಶ್ ಅವರು ದಾಖಲೆಗಳನ್ನು ಅನಿಲ್ ಎಂಬುವವರಿಗೆ ಹಸ್ತಾಂತರಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮೀನಾಕ್ಷಿ ಅವರು ಹೃದಯ ಸಂಬಂಧಿತ ಕಾಯಿಲೆಯಿಂದ ವೈದೇಹಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ, ಆರೋಪಿಗಳಾದ ಅನಿಲ್ ಕುಮಾರ್, ನಾಗರಾಜು, ರಂಗಪ್ಪ, ಸುರೇಶ್ ಹಾಗೂ ಗೋಪಿ ಒಟ್ಟಾಗಿ ಸೇರಿ, ಅವರ ಮನೆಯನ್ನು ಧ್ವಂಸ ಮಾಡಿ ಜಾಗವನ್ನು ಕಬಳಿಸಿದ್ದಾರೆ. ಅಲ್ಲದೆ ಮೀನಾಕ್ಷಿಯ ಮಗಳನ್ನು ಬೈದು-ಹೊಡೆದು ಮನೆಯಿಂದ ಹೊರಹಾಕಿದ್ದು, ಮನೆಯಲ್ಲಿದ್ದ ದಾಖಲೆಗಳು ಹಾಗೂ ವಸ್ತುಗಳನ್ನು ಕದ್ದಿದ್ದಾರೆ ಎಂಬುದೂ ದೂರಿನಲ್ಲಿ ತಿಳಿಸಲಾಗಿದೆ.
ಇದರ ಜೊತೆಗೆ, “ನಿಮ್ಮ ಮಕ್ಕಳು ಜೀವನ ಮಾಡೋದು ಹೇಗೆ ನೋಡೋಣ” ಎಂದು ಆರೋಪಿಗಳು ಜೀವ ಬೆದರಿಕೆ ಹಾಕಿದ್ದಾರೆ ಎಂದು ಮೀನಾಕ್ಷಿ ತಿಳಿಸಿದ್ದಾರೆ. “ನಮಗೆ ಅಥವಾ ನಮ್ಮ ಕುಟುಂಬಕ್ಕೆ ಏನಾದರೂ ಆಪತ್ತು ಸಂಭವಿಸಿದರೆ, ಇದಕ್ಕೆ ಮೇಲ್ಕಂಡವರೇ ಕಾರಣ” ಎಂದು ದೂರಿನಲ್ಲಿ ತಿಳಿಸಿದ್ದಾರೆ.

