ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ಕೇಂದ್ರ ಮತ್ತು ಹಿಂದಿನ ಬಿಜೆಪಿ ಸರ್ಕಾರವೇ ಅನುಮತಿ ನೀಡಿದೆ: ಸಚಿವ ಮಂಕಾಳು ವೈದ್ಯ
ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ಕೇಂದ್ರ ಮತ್ತು ಹಿಂದಿನ ಬಿಜೆಪಿ ಸರ್ಕಾರವೇ ಅನುಮತಿ ನೀಡಿದೆ: ಸಚಿವ ಮಂಕಾಳು ವೈದ್ಯ
ಕಾರವಾರ: ಶರಾವತಿ ಪಂಪ್ ಸ್ಟೋರೇಜ್ ಯೋಜನೆ (Sharavathi Pump Storage Project) ಕುರಿತು ವಿವಾದ ಮುಂದುವರಿಯುತ್ತಿದ್ದರೂ, ಈ ಯೋಜನೆಗೆ ಅನುಮತಿ ನೀಡಿದವರು ಕೇಂದ್ರ ಸರ್ಕಾರ ಹಾಗೂ ಹಿಂದಿನ ಬಿಜೆಪಿ ಸರ್ಕಾರವೆಂದು ಸಚಿವ ಮಂಕಾಳು ವೈದ್ಯ ಸ್ಪಷ್ಟಪಡಿಸಿದ್ದಾರೆ.
ಜಿಲ್ಲಾ ಕನ್ನಡ ರಾಜ್ಯೋತ್ಸವದ ಪ್ರಧಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,
“ಜನರಿಗೆ ತೊಂದರೆ ಉಂಟಾಗುತ್ತಿದ್ದರೆ ನಾನು ವೈಯಕ್ತಿಕವಾಗಿ ಈ ಯೋಜನೆಗೆ ವಿರೋಧಿಯೇ. ಇದನ್ನು ಬಹಳ ಹಿಂದೆಯೇ ಹೇಳಿದ್ದೇನೆ, ಈಗಲೂ ಅದೇ ನಿಲುವು ಇದೆ,” ಎಂದು ಹೇಳಿದರು.
ಶರಾವತಿ ಪಂಪ್ ಸ್ಟೋರೇಜ್ ಯೋಜನೆ ಎರಡೂ ಜಿಲ್ಲೆಗಳಲ್ಲಿ ವಿಸ್ತರಿಸಿಕೊಳ್ಳುತ್ತಿರುವುದಾಗಿ ಸಚಿವರು ಹೇಳಿದರು.
“ಈ ಯೋಜನೆಗೆ ಸಂಬಂಧಿಸಿದಂತೆ ಸ್ಥಳೀಯ ಸಂಸದರು, ಶಾಸಕರ ಅಭಿಪ್ರಾಯ ಮುಖ್ಯ. ತಜ್ಞರಿಂದ ಅಧ್ಯಯನ ಮುಂದುವರಿದಿದೆ. ಸರ್ಕಾರದ ವಿವಿಧ ಇಲಾಖೆಗಳ ತಜ್ಞರು ಸಮಗ್ರ ವಿಶ್ಲೇಷಣೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ,” ಎಂದು ತಿಳಿಸಿದರು.
ಅವರು ಮುಂದುವರೆದು, “ಕೈಗಾ, ಸೀಬರ್ಡ್, ಕಾಳಿ ಪವರ್ ಯೋಜನೆಗಳಿಗೆ ಸಹಕಾರ ನೀಡಿದ್ದೇವೆ. ಅಭಿವೃದ್ಧಿ ಯೋಜನೆಗಳನ್ನು ವಿರೋಧಿಸುವ ಉದ್ದೇಶ ನಮ್ಮದು ಅಲ್ಲ, ಆದರೆ ಜನರ ಹಿತವೇ ಮೊದಲ ಆದ್ಯತೆ,” ಎಂದರು.
ಬೇಡ್ತಿ-ವರದಾ ನದಿ ಜೋಡಣೆ ಕುರಿತು ಪ್ರತಿಕ್ರಿಯೆ:
ಈ ಯೋಜನೆ ಕುರಿತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ ಎಂದು ಸಚಿವ ವೈದ್ಯ ಹೇಳಿದರು.
“ಇದು ಸಂತೋಷದ ವಿಷಯ. ಅಲ್ಲಿನ ಶಾಸಕರು, ವಿಧಾನ ಪರಿಷತ್ ಸದಸ್ಯರು ಸಹ ಭಾಗಿಯಾಗಿದ್ದಾರೆ. ಕೇಂದ್ರ ಸರ್ಕಾರದ ಯೋಜನೆಯಾದ್ದರಿಂದ ಅದನ್ನು ತಡೆಯುವ ಅಧಿಕಾರವೂ ಅವರದ್ದೇ,” ಎಂದು ವಿವರಿಸಿದರು.

