ಮನೆಗೆ ನುಗ್ಗಿ ಹಲ್ಲೆ – ನಾಲ್ವರು ವಿರುದ್ಧ ದೂರು ದಾಖಲು
ಬೆಂಗಳೂರು ಜುಲೈ 30 2025 –
ಬಾಗಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಲ್ವರು ವ್ಯಕ್ತಿಗಳು ಮಹಿಳೆಯೊಬ್ಬರ ಮನೆಗೆ ಬಲವಂತವಾಗಿ ನುಗ್ಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಆಕೆ ಮತ್ತು ಆಕೆಯ ಮಗನಿಗೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಈ ಸಂಬಂಧ ದೇವನಹಳ್ಳಿ ನ್ಯಾಯಾಲಯದಲ್ಲಿ ಪಿರ್ಯಾದು ದಾಖಲಾಗಿ ಪ್ರಕರಣ ದಾಖಲಾಗಿದೆ.
ಪಿರ್ಯಾದಿದಾರರ ದೂರಿನ ಪ್ರಕಾರ, ಏಪ್ರಿಲ್ 10ರಂದು ಸಂಜೆ 5:00 ರಿಂದ 5:30ರ ವೇಳೆಗೆ ರಾಮಾಂಜನಪ್ಪ, ಚಂದ್ರು (ಪಿರ್ಯಾದಿದಾರರ ಸಹೋದರನ ಮಕ್ಕಳು), ರಮೇಶ್ ಹಾಗೂ ಅವರ ತಂದೆ ಸೇರಿ ನಾಲ್ವರು ಆರೋಪಿಗಳು ಮನೆಗೆ ನುಗ್ಗಿ, ಪಿರ್ಯಾದಿದಾರರ ಮಗ ವೆಂಕಟೇಶ್ಗೆ ಕೊಲೆ ಬೆದರಿಕೆ ಹಾಕಿ, ಇಬ್ಬರಿಗೂ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ.
ಹಲ್ಲೆಯ ವೇಳೆ ಪಿರ್ಯಾದಿದಾರರ ಸೀರೆ ಹರಿದು, ಕೈಬಳೆಗಳು ತೂರಿ ಹೋಗಿದ್ದು, ಅವರ ಕೈ, ಎದೆ ಹಾಗೂ ಮುಖದಲ್ಲಿ ಗಾಯಗಳಾಗಿವೆ. ಬಳಿಕ ಅವರು ಯಲಹಂಕ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ.
ಘಟನೆಯ ದಿನದಂದು ಬಾಗಲೂರು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಪೊಲೀಸರು ಕೇವಲ NCR (ನಾನ್-ಕಾಗ್ನಿಜಬಲ್ ರಿಪೋರ್ಟ್) ದಾಖಲಿಸಿ ಸ್ವೀಕೃತಿ ನೀಡಿದರೆಂದು ಪಿರ್ಯಾದಿದಾರರು ದೂರಿದ್ದಾರೆ. ನಂತರ, ಅವರು ದಿನಾಂಕ 15-04-2025 ರಂದು ಪೊಲೀಸ್ ಆಯುಕ್ತರಿಗೆ ನೋಂದಾಯಿತ ಅಂಚೆಯ ಮೂಲಕ ಬಾಗಲೂರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಈ ಕುರಿತು ದೇವನಹಳ್ಳಿ ನ್ಯಾಯಾಲಯದ ಮಾನ್ಯ 1ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಪಿಸಿಆರ್ ಸಂಖ್ಯೆ 353/2021 ಅಡಿಯಲ್ಲಿ ವಿಚಾರಣೆ ಪ್ರಾರಂಭವಾಗಿದ್ದು, ಈಗ ಪ್ರಕರಣವು ಸಿಆರ್ ಸಂಖ್ಯೆ 271/2025ರಂತೆ ದಾಖಲಾಗಿದೆಯೆಂದು ತಿಳಿದುಬಂದಿದೆ.

