ಸುದ್ದಿ 

ಆನೇಕಲ್ ತಾಲೂಕಿನಲ್ಲಿ ಆಸ್ತಿ ವಂಚನೆ ಆರೋಪ: ಪುತ್ರನ ವಿರುದ್ಧ ದೂರು

Taluknewsmedia.com

ಆನೇಕಲ್, ಆಗಸ್ಟ್ 6– ತಂದೆಯ ಹೆಸರಿನಲ್ಲಿ ಇರುವ ಜಮೀನು ಮತ್ತು ಸೈಟುಗಳನ್ನು ತಪ್ಪು ದಾಖಲೆ ಮೂಲಕ ತನ್ನ ಹೆಸರಿಗೆ ಪೌತಿ ಮಾಡಿಕೊಂಡು ಆಸ್ತಿ ವಂಚನೆ ಮಾಡಿದ ಪ್ರಕರಣವೊಂದು ಆನೇಕಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಕರಕಲಘಟ್ಟ ಗ್ರಾಮದ ನಿವಾಸಿ ರಾಮಚಂದ್ರಪ್ಪ ಬಿನ್ ಲೇಟ್ ಅಳ್ಳಳ್ಳಪ್ಪ ಅವರು ನೀಡಿದ ದೂರಿನ ಪ್ರಕಾರ, ತಮ್ಮ ತಂದೆಯ ಹೆಸರಿನಲ್ಲಿ ತಮ್ಮನಾಯಕನಹಳ್ಳಿ ಸರ್ವೆ ನಂ.174/1 ರಲ್ಲಿ 1 ಎಕರೆ 27.08 ಗುಂಟೆ, ಚಿಕ್ಕಹೊಸಹಳ್ಳಿ ಸರ್ವೆ ನಂ.6/2 ಮತ್ತು ಹೊಸ ಸರ್ವೆ ನಂ.6/7 ರಲ್ಲಿ 0.12.12 ಗುಂಟೆ ಜಮೀನು ಮತ್ತು ಕರಕಲಘಟ್ಟದ ಜುಂಜರು ನಂ.45, ಆಸ್ತಿ ನಂ.28 ರಂತೆ ಮೂರು ಸೈಟುಗಳು ದಾಖಲಾಗಿದ್ದವು.

ಇದುವರೆಗೆ ಈ ಆಸ್ತಿಗಳನ್ನು ಅವರು ಅಥವಾ ಅವರ ಕುಟುಂಬದವರು ತಮ್ಮ ಹೆಸರಿನಲ್ಲಿ ಪೌತಿ ಮಾಡಿಕೊಂಡಿಲ್ಲವೆಂಬುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಸಂದರ್ಭ, ರಾಮಚಂದ್ರಪ್ಪನವರ ಚಿಕ್ಕಪ್ಪನ ಮಗ ಗೋಪಾಲಕೃಷ್ಣ ಕೆ.ವಿ. (ಬಿನ್ ಲೇಟ್ ವರದಪ್ಪ) ಅವರು ತಮ್ಮ ತಾಯಿ ಮತ್ತು ತಮ್ಮ ಅಕ್ಕಂದಿರಾದ ಮಂಜುಳ ಮತ್ತು ಪದ್ಮ ಅವರಿಂದ ಹಕ್ಕು ಬಿಡುಗಡೆ ಪತ್ರ ಮಾಡಿಕೊಂಡು, 05-08-2024ರಂದು ಆನೇಕಲ್ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ದಾಖಲೆ ಮಾಡಿಸಿಕೊಂಡಿದ್ದಾರೆ. ನಂತರ ತಹಸೀಲ್ದಾರ್ ಕಚೇರಿಯಲ್ಲಿ ಅಕ್ರಮವಾಗಿ ಪೌತಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ರಾಮಚಂದ್ರಪ್ಪನವರಿಗೆ ಯಾವುದೇ ಮಾಹಿತಿ ಇಲ್ಲದಿರುವ ಸಂದರ್ಭ, ದಿನಾಂಕ 03-08-2025 ರಂದು ಜಮೀನಿನಲ್ಲಿ ರಾಗಿಯನ್ನು ಬಿತ್ತಲು ಬ್ಯಾಂಕಿಗೆ ತೆರಳಿದ ವೇಳೆ ಈ ಅಕ್ರಮ ಬೆಳಕಿಗೆ ಬಂದಿದ್ದು, ತಾನು ಹಾಗೂ ತನ್ನ ಕುಟುಂಬದವರು ಮೋಸಕ್ಕೆ ಒಳಗಾಗಿರುವುದಾಗಿ ತಿಳಿಸಿದ್ದಾರೆ.

Related posts