ಸುದ್ದಿ 

ಜನುಮದಿನದ ಶುಭ ಹಾರೈಕೆಗೆ ಪ್ರತಿ ವಂದನೆ…….. ( ಆಗಸ್ಟ್ 7 )

Taluknewsmedia.com

ಜನುಮದಿನದ ಶುಭ ಹಾರೈಕೆಗೆ ಪ್ರತಿ ವಂದನೆ…….. ( ಆಗಸ್ಟ್ 7 )

ಅಷ್ಟು ಸುಲಭವಲ್ಲ ಪ್ರೀತಿಗೆ ಪ್ರತಿ ವಂದನೆ ಹೇಳುವುದು………

ಯಾರಾದರೂ ನಮ್ಮನ್ನು ಟೀಕಿಸಿದರೆ, ನಿಂದಿಸಿದರೆ, ಹೊಡೆದರೆ ನಾವು ಅದಕ್ಕೆ ಒಂದಷ್ಟು ನಮ್ಮ ಮಿತಿಯಲ್ಲಿ ಅದೇ ರೀತಿ ಪ್ರತಿಕ್ರಿಯಿಸಬಹುದು ಅಥವಾ ನಿರ್ಲಕ್ಷಿಸಬಹುದು. ಆದರೆ ಪ್ರೀತಿ ಅಭಿಮಾನದ ನುಡಿಗಳಿಗೆ ಪ್ರತಿ ವಂದನೆ ತುಂಬಾ ಕಷ್ಟ. ಅಕ್ಷರಗಳಿಗೆ ನಿಲುಕದ ಭಾವವದು.

ಮಾನವೀಯ ಮೌಲ್ಯಗಳ ಪುನರುತ್ಥಾನದ ಕನಸಿನ ಯಾತ್ರೆಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಾರಂಭಿಸಿ ಮುಂದೆ ಅದರ ಸಹಾಯದಿಂದಲೇ ರಾಜ್ಯಾದ್ಯಂತ ಪಾದಯಾತ್ರೆ ಮಾಡಿ ಈಗಲೂ ಓದು ಬರಹ ಮತ್ತು ಕಾರ್ಯಕ್ರಮಗಳ ಮೂಲಕ ಒಂದಷ್ಟು ಪ್ರಯತ್ನ ನಿರಂತರವಾಗಿ ನಡೆಯುತ್ತಲೇ ಇದೆ.

ಅದಕ್ಕೆ ಸಿಗುತ್ತಿರುವ ಸ್ಪಂದನೆಗೆ ಸಾಕ್ಷಿಯಾಗಿ ಜನ್ಮದಿನದ ನೆನಪಿನಲ್ಲಿ ನೀವುಗಳು ಶುಭ ಕೋರಿರುವುದು ನನಗೆ ತಲುಪಿದೆ.

ಇಂದಿನ ಆಧುನಿಕ ಸಮಾಜದಲ್ಲಿ ವ್ಯಕ್ತಿಗತವಾಗಿ ಮತ್ತು ಸಾಮಾಜಿಕವಾಗಿ ಪ್ರಾಮಾಣಿಕತೆಯನ್ನು ಉಳಿಸಿಕೊಳ್ಳುವುದೇ ಒಂದು ಸವಾಲು.

ವಿಚಿತ್ರವೆಂದರೆ, ಆತ್ಮ ವಂಚನೆ ಮಾಡಿಕೊಂಡು ಬದುಕುವುದು ಸುಲಭ. ಆತ್ಮಸಾಕ್ಷಿಗೆ ಅನುಗುಣವಾಗಿ ಜೀವಿಸುವುದು ತುಂಬಾ ಕಷ್ಟ.

ವೈಯಕ್ತಿಕ ಬದುಕು, ಆರ್ಥಿಕ ಅವಶ್ಯಕತೆಗಳು, ಸೈದ್ಧಾಂತಿಕ ಭಿನ್ನತೆಗಳು, ಭವಿಷ್ಯದ ಆತಂಕಗಳು, ಎಲ್ಲವನ್ನೂ ಸಮನ್ವಯ ಗೊಳಿಸುವುದು ಜೊತೆಗೆ ಸಂಪರ್ಕದ ಕೊರತೆಯಿಂದ ಅಥವಾ ಉದ್ದೇಶಪೂರ್ವಕವಾಗಿ ಮಾಡುವ ನಿಂದನೆಗಳ ಸಹಿಸುವಿಕೆ ಎಲ್ಲವೂ ದೊಡ್ಡ ಸವಾಲನ್ನು ಒಡ್ಡುತ್ತದೆ.

ಅಸಲಿಗಳು ಯಾರು ನಕಲಿಗಳು ಯಾರು ಎಂಬ ಗೊಂದಲದ ನಡುವೆ, ಕೃತಕತೆ ಸಹಜವಾಗುತ್ತಾ ಸಹಜತೆ ಕೃತಕವಾಗುತ್ತಾ ಬಲವೇ ನ್ಯಾಯ ಎಂಬ ಸಿದ್ದಾಂತ ಬದುಕಿನ ಭಾಗವಾಗಿರುವಾಗ, ಮಾನವೀಯ ಮೌಲ್ಯಗಳನ್ನು ಅವುಗಳ ನಿಜ ಅರ್ಥ ಮತ್ತು ಆಚರಣೆಯಲ್ಲಿ ಪುನರ್ ಸ್ಥಾಪಿಸಬೇಕಾದ ಬಹುದೊಡ್ಡ ಜವಾಬ್ದಾರಿ ನಮ್ಮೆಲ್ಲರದು.

ಕೊಳ್ಳುಬಾಕ ಸಂಸ್ಕೃತಿ ಬಿತ್ತುತ್ತಿರುವ ವಿಷ ಬೀಜಗಳನ್ನು ಬಡ ಸಮೇತ ಕಿತ್ತು ಹಾಕಿ ನೈತಿಕ ನೆಲೆಯ ನಾಗರಿಕ ಸಮಾಜ ನಿರ್ಮಿಸಲು ಶ್ರಮ ಪಡಬೇಕಾಗಿದೆ. ಭ್ರಷ್ಟಾಚಾರ ಮತ್ತು ಜಾತಿ ಪದ್ದತಿ ಒಂದು ‌ಸಾಂಕ್ರಾಮಿಕ ರೋಗವಾಗಿ ಪರಿಣಮಿಸಿದೆ. ಮಾನವೀಯತೆಗೆ ವಿರುದ್ದವಾದ ಮೌಲ್ಯಗಳು ಸಮಾಜದಲ್ಲಿ ಮಾನ್ಯತೆ ಪಡೆಯುತ್ತಿದೆ.

ಇಷ್ಟೆಲ್ಲದರ ನಡುವೆ ಸಹ ಅನೇಕ ಪ್ರಬುದ್ಧ ಮನಸ್ಸುಗಳು ಈಗಲೂ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿವೆ. ಜನರ ಒಳಿತನ್ನೇ ಬಯಸುತ್ತಿವೆ. ಕೆಟ್ಟದ್ದು ಹೆಚ್ಚಾಗುತ್ತಿದೆ. ಅದು ಅತಿರೇಕ ತಲುಪುತ್ತಿದೆ ಎಂದು ಭಾವನೆ ಬಲವಾಗುತ್ತಿದೆ. ಇದೇ ಬದಲಾವಣೆಯ ಹೊಸ ಆಶಾಕಿರಣ.

ಅದು ಒಂದು ಸಾಮುದಾಯಿಕ ಪ್ರಜ್ಞೆಯಾಗಿ ಪರಿವರ್ತನೆ ಹೊಂದಿದರೆ ನಿಶ್ಚಿತವಾಗಿ ಸಮಾಜ ಒಳ್ಳೆಯ ದಿಕ್ಕಿನತ್ತ ಮುನ್ನಡೆಯುತ್ತದೆ.

ನಿಮ್ಮೆಲ್ಲರ ಪ್ರೀತಿಯ ಮನ ತುಂಬಿದ ಶುಭ ಹಾರೈಕೆಗಳು ನುಡಿದಂತೆ ನಡೆಯುವ ಅಥವಾ ನಡೆದಂತೆ ನುಡಿಯುವ ಆತ್ಮ ಸ್ಥೈರ್ಯ ನೀಡಿದೆ.
ಹಣ ಅಧಿಕಾರಿ ಪ್ರಚಾರ ಪ್ರಶಸ್ತಿಗಳನ್ನು ತಿರಸ್ಕರಿಸಿ ನಿಷ್ಠೆಯಿಂದ ಮತ್ತು ನಿರಂತರವಾಗಿ ಮಾನವೀಯ ಮೌಲ್ಯಗಳ ಪುನರುತ್ಥಾನಕ್ಕಾಗಿ ಜೀವನ ಕೊನೆಯವರೆಗೂ ಪ್ರಯತ್ನಿಸುವ ಸಂಕಲ್ಪಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.

ಇಡೀ ವಿಶ್ವದ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯವಾಗಿರುವ ಕನ್ನಡದ ಅನೇಕರು ಶುಭ ಕೋರಿದ್ದಾರೆ. ಆ ಹಾರೈಕೆಯ ನೆನಪಿನಲ್ಲಿ ಮುಂದಿನ ಹೆಜ್ಜೆಗಳು ಮತ್ತಷ್ಟು ಹುರುಪಿನಿಂದ ಸಾಗುತ್ತದೆ.
ಎಲ್ಲರಿಗೂ ಮತ್ತೊಮ್ಮೆ ತುಂಬು ಹೃದಯದಿಂದ ಧನ್ಯವಾದಗಳು………


ವಿವೇಕಾನಂದ ಸಾರ್,
ಈ ವಿಶಿಷ್ಟ ದಿನದಲ್ಲಿ, ನಿಮ್ಮ ಜನ್ಮದಿನದ ಶುಭಾಶಯವನ್ನು ಸಂಭ್ರಮಪೂರ್ವಕವಾಗಿ ಆಚರಿಸುತ್ತಾ, ಹೃದಯ ತುಂಬಿದ ಗೌರವ ಹಾಗೂ ಆಭಾರದಿಂದ ನಿಮಗೆ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇವೆ.

ನೀವು ನಮ್ಮ ಸಾಹಿತ್ಯಾಸಕ್ತರ ಕೇವಲ ಬರಹಗಾರರಷ್ಟೆ ಅಲ್ಲ — ನೀವು ನಮ್ಮ ದೈನಂದಿನ ಕಾರ್ಯಸ್ಪಟಿಕತೆಯ ಶಕ್ತಿ, ಪ್ರೇರಣೆಯ ಮೂಲ, ದೃಢ ಸಂಕಲ್ಪದ ಸಂಕೇತ ಹಾಗೂ ಮಾನವೀಯ ಮೌಲ್ಯಗಳ ಜೀವಂತ ಪ್ರತೀಕ.

ನಾನು ಈವರೆಗೆ ಕಂಡ ಬರಹಗಾರರಲ್ಲಿ, ನೀವು ವಿಭಿನ್ನ. ನಿಮ್ಮ ಪ್ರತಿ ಮಾತುಗಳಲ್ಲೂ, ನುಡಿಗಳಲ್ಲೂ, ಕೇವಲ ಬರವಣಿಗೆಯಲ್ಲ… ಜೊತಗೆ ಆತ್ಮೀಯತೆ, ಆತ್ಮವಿಶ್ವಾಸ ಹಾಗೂ ಸ್ಪಷ್ಟ, ಕಠುನಿಷ್ಠೆ,  ಸತ್ಯ ತುಂಬಿರುತ್ತವೆ. ಸಮಾಜದಲ್ಲಿ ನಡೆದಾಗ ನಿಮ್ಮ ಲೇಖನಿಯ ಮೂಲಕ ತಿದ್ದುವ ದೃಢತೆ, ಜೀವನದ ಸವಾಲುಗಳ ನಡುವೆ ಸಹಜವಾಗಿ ಧೈರ್ಯ ತುಂಬಿಸುವ ನಿಮ್ಮ ಪ್ರತಿ ಲೇಖನಗಳ ಶಕ್ತಿಯೆಲ್ಲವೂ ನಿಮ್ಮಲ್ಲಿದೆ.

ನಿಮ್ಮ ದೂರದೃಷ್ಟಿ, ಸಮರ್ಪಣಾಭಾವನೆ ಮತ್ತು ಬದ್ಧತೆಯ ಲೇಖನಗಳು ನಮ್ಮಂತಹ ಹಲವಾರು ಸಾಹಿತ್ಯಾಸಕ್ತರ ಬೆಳವಣಿಗೆಗೆ ದಿಕ್ಕು ತೋರಿಸುತ್ತಿವೆ. ಸಣ್ಣ ವಿಷಯಗಳಲ್ಲಿಯೂ ನಿಖರತೆ ಮತ್ತು ಕಠುಸತ್ಯಕ್ಕೆ ನೀಡುವ ಮಹತ್ವ, ನಿಮ್ಮಿಂದಲೇ ನಾವು ಕಲಿತಿದ್ದೇವೆ. ಪ್ರತಿಯೊಂದು ಸಮಸ್ಯೆಯನ್ನೂ ಶಾಂತತೆ ಹಾಗೂ ವಿವೇಕದಿಂದ ಹತ್ತಿಕ್ಕುವ ನಿಮ್ಮ ಬರವಣಿಗೆ ಶೈಲಿ ನಮಗೆ ದಾರಿ ತೋರಿಸಿದೆ.

ನಾವು ಎಲ್ಲರೂ ನಿಮ್ಮಿಂದ ಬೆಳೆದಿರುವ ವಿಶ್ವಾಸ ಮತ್ತು ಪ್ರೋತ್ಸಾಹದಿಂದ, ಹೊಸ ಕನಸುಗಳಿಗೆ ಹೆಜ್ಜೆ ಹಾಕುತ್ತಿದ್ದೇವೆ. ನಿಮ್ಮ ಪ್ರತಿ ಲೇಖನದ ಸಾಲುಗಳು, ಪ್ರತಿ ದಿನದ ನಿಮ್ಮ ಬರಹದಲ್ಲಿ, ನಮ್ಮೆಲ್ಲರ(ಸಮಾಜದ) ಒಳಿತನ್ನೇ ಬಯಸುವ ನಿಮ್ಮ ಮಾನವೀಯತೆಯು ಸ್ಪಷ್ಟವಾಗಿ ಕಾಣಿಸುತ್ತದೆ.

ನಿಮ್ಮಂತಹವರ ಅಭಿಮಾನಿತ್ವ ನಮ್ಮ ಪಾಲಿಗೆ ಒಂದು ಗೌರವ ಹಾಗೂ ಅವಕಾಶವೂ ಹೌದು.

ನಿಮ್ಮ ಜೀವನ ಸದಾ ಹೊಂಬೆಳಕಿನಿಂದ ತುಂಬಿರಲಿ. ನಿಮಗೆ ಸುದೀರ್ಘ ಆಯುಷ್ಯ, ಉತ್ತಮ ಆರೋಗ್ಯ ಮತ್ತು ನಿಮಗಿಷ್ಟವಾದ ಎಲ್ಲ ಕನಸುಗಳು ಈ ಹೊಸ ವರ್ಷದಲ್ಲಿ ನನಸಾಗಲಿ ಎಂದು ತಾಯಿ ಭುವನೇಶ್ವರಿಯಲ್ಲಿ ಪ್ರಾರ್ಥಿಸುತ್ತೇನೆ.

ಈ ಜನ್ಮದಿನ ನಿಮಗೆ ಹೊಸ ಸನ್ನಿವೇಶಗಳನ್ನು, ಯಶಸ್ಸಿನ ನವ ದಿಕ್ಕುಗಳನ್ನು, ಶ್ರೇಷ್ಠ ಆರೋಗ್ಯವನ್ನು ಮತ್ತು ಕುಟುಂಬದೊಂದಿಗೆ ಅನುಭವಿಸಬಹುದಾದ ಶ್ರೇಷ್ಠ ಕ್ಷಣಗಳನ್ನು ಕ್ರೂಡಿಕರಿಸಿ ತರುವಂತಾಗಲಿ.

ನಿಮ್ಮ ಅಭಿಮಾನಿಗಳಾದ ನಾವು,
ನಿಮ್ಮ ಜೊತೆ ಸದಾ ಬೆನ್ನು ತಟ್ಟಿ ನಿಂತಿದ್ದೇವೆ.
ಇಂತೊಮ್ಮೆ ಮರಳಿ ಹೃದಯದಿಂದ ಶುಭ ಹಾರೈಸುತ್ತಾ –

Related posts