ಯಲಹಂಕದಲ್ಲಿ ಯುವಕರ ಮೇಲೆ ಬೈಕ್ ಸವಾರರ ದಾಳಿ – ಬೆದರಿಕೆ ಹಾಕಿದ ಆರೋಪ
ಬೆಂಗಳೂರು ಆಗಸ್ಟ್ 11 2025
ಯಲಹಂಕದಲ್ಲಿ ಬೆಳಗಿನ ಜಾವ ಯುವಕರ ಮೇಲೆ ಬೈಕ್ ಸವಾರರ ಗುಂಪು ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ.
ಪೀಡಿತರ ಹೇಳಿಕೆಯ ಪ್ರಕಾರ, ಆಗಸ್ಟ್ 6ರಂದು ಬೆಳಗ್ಗೆ ಸುಮಾರು 7 ಗಂಟೆಗೆ, ದೂರುದಾರರು ತಮ್ಮ ತಮ್ಮ ಚೇತನ್ ಹಾಗೂ ಸ್ನೇಹಿತ ಸುಬ್ರಮಣಿಯವರೊಂದಿಗೆ ರೇವಾ ಕಾಲೇಜ್ ಎದುರಿನ ಟೀ ಟೈಮ್ ಅಂಗಡಿ ಮುಂದೆ ನಿಂತುಕೊಂಡಿದ್ದರು. ಆ ವೇಳೆ ಹಳ್ಳಿಯ ಪರಿಚಿತನಿಗೆ ‘ಹಾಯ್’ ಎಂದ ತಕ್ಷಣ, ಬೈಕ್ನಲ್ಲಿ ಬಂದ ನಾಲ್ವರಿಂದ ಐದು ಮಂದಿ ಏಕಾಏಕಿ ಹಲ್ಲೆ ನಡೆಸಿದರು.
ಆರೋಪಿಗಳು ಹೆಲ್ಮೆಟ್ ಮತ್ತು ಇಟ್ಟಿಗೆಯಿಂದ ದೂರುದಾರರ ತಲೆ, ಬೆನ್ನು, ಮುಖ ಭಾಗಗಳಿಗೆ ಹೊಡೆದು ಗಂಭೀರ ಗಾಯಗೊಳಿಸಿದರು. ದೂರುದಾರರ ತಮ್ಮ ಹಾಗೂ ಸ್ನೇಹಿತನಿಗೂ ಇದೇ ರೀತಿಯ ಹಲ್ಲೆ ನಡೆಸಲಾಯಿತು. ಘಟನೆಯ ನಂತರ ಬಸವರಾಜ್ ಎಂಬಾತ “ಇದು ಸ್ಯಾಂಪಲ್, ಮುಂದೆ ನೀನಾಗಲಿ ನಿನ್ನ ಕಾರಾಗಲಿ ಕಂಡರೆ ಮುಗಿಸುತ್ತೇನೆ” ಎಂದು ಬೆದರಿಕೆ ಹಾಕಿ ಆರೋಪಿಗಳೊಂದಿಗೆ ಸ್ಥಳದಿಂದ ಪರಾರಿಯಾದನು.
ಗಾಯಗೊಂಡ ಮೂವರೂ ಯಲಹಂಕ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡ ನಂತರ, ಯಲಹಂಕ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ. ಪೊಲೀಸರು ಬಸವರಾಜ್ ಸೇರಿದಂತೆ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ತನಿಖೆ ಆರಂಭಿಸಿದ್ದಾರೆ.

