ಕುಟುಂಬ ಜಮೀನು ಗಲಾಟೆ – ವ್ಯಕ್ತಿಗೆ ಗಂಭೀರ ಗಾಯ
ಬೆಂಗಳೂರು: ಆಗಸ್ಟ್ 12 2025
ಕುಟುಂಬ ಜಮೀನು ವಿಚಾರದಲ್ಲಿ ಉಂಟಾದ ವೈಷಮ್ಯ ತೀವ್ರಗೊಂಡು ಗಲಾಟೆಗೆ ತಿರುಗಿದ ಘಟನೆ ಚಿಕ್ಕಜಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಾಗರಾಜು ಅವರ ಹೇಳಿಕೆಯಂತೆ, ಆಗಸ್ಟ್ 5ರಂದು ಬೆಳಗ್ಗೆ 8.30ರ ಸುಮಾರಿಗೆ, ಪಕ್ಕದ ಮನೆಯಲ್ಲಿದ್ದ ದೊಡ್ಡಮ್ಮ ಮುನಿಯಮ್ಮ ಅವರು ನಾಗರಾಜು ಅವರ ತಮ್ಮನಾದ ಕೃಷ್ಣನಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಇದರಿಂದ ಉಂಟಾದ ವಾಗ್ವಾದಕ್ಕೆ, ಶ್ರೀನಿವಾಸ, ಕಿಶೋರ್, ಹರೀಶ್ ಹಾಗೂ ಚಂದ್ರಕಲಾ ಸೇರಿಕೊಂಡು ನಾಗರಾಜು ಮತ್ತು ಅವರ ಕುಟುಂಬದ ಮೇಲೆ ದಾಳಿ ಮಾಡಿದ್ದಾರೆ.
ಘಟನೆಯ ವೇಳೆ, ಶ್ರೀನಿವಾಸ ಅವರು ನಾಗರಾಜ ಅವರ ಕುತ್ತಿಗೆಯ ಪಟ್ಟಿಯನ್ನು ಹಿಡಿದು ಮುಖಕ್ಕೆ ಹೊಡೆದಿದ್ದು, ಹರೀಶ್ ಅವರು ನೀಲಗಿರಿ ದೊಣ್ಣೆಯಿಂದ ನಾಗರಾಜು ತಲೆಗೆ ಬಲವಾದ ಹೊಡೆತ ನೀಡಿದ್ದಾರೆ. ಚಂದ್ರಕಲಾ ಮತ್ತು ಕಿಶೋರ್ ಕೃಷ್ಣನಿಗೆ ಕೈಯಿಂದ ಹೊಡೆದಿದ್ದಾರೆ. ಗಲಾಟೆಯಲ್ಲಿ ಮಧ್ಯ ಪ್ರವೇಶಿಸಿದ ನಾಗರಾಜು ಪತ್ನಿ ಲಕ್ಷ್ಮೀದೇವಿಯವರಿಗೂ ಹೊಡೆತ ಬಿದ್ದಿದೆ.
ಸ್ಥಳೀಯ ವೆಂಕಟೇಶ್ ಮತ್ತು ಪ್ರವೀಣರು ಗಲಾಟೆಯನ್ನು ನಿಲ್ಲಿಸಿದ ನಂತರ, ಗಾಯಗೊಂಡವರನ್ನು ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಿಕ್ಕಜಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.

