ಗ್ರಾಮೀಣಾಭಿವೃದ್ದಿ ಯೋಜನೆಯ ಹೆಸರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಅಪರಾಧ ನಡೆದಿರುವುದು, ಮೈಕ್ರೊ ಫೈನಾನ್ಸ್ ನಡೆಸಿರುವ ಆರೋಪಗಳು ವ್ಯಾಪಕವಾಗಿದೆ.
ಧರ್ಮಸ್ಥಳ ಅಪರಾಧ ಪ್ರಕರಣಗಳ ಕುರಿತಾದ ಹೋರಾಟಗಳ ವಿಷಯದಲ್ಲಿ ತಪ್ಪು ಮಾಹಿತಿ ಹರಡುತ್ತಿರುವ ಸಂದರ್ಭದಲ್ಲಿ ..
ಮುಸುಕುದಾರಿ ಚಿನ್ನಯ್ಯ ಕೊಟ್ಟ ದೂರಿನ ಬಳಿಕ ಧರ್ಮಸ್ಥಳ ದೌರ್ಜನ್ಯದ ವಿರುದ್ಧದ ಹೋರಾಟ ಪ್ರಾರಂಭವಾಗಿದ್ದಲ್ಲ.
ಧರ್ಮಸ್ಥಳದ ಅಸಹಜ ಸಾವುಗಳು, ಕೊಲೆ, ಅತ್ಯಾಚಾರ, ಭೂ ಅಕ್ರಮ, ಮೈಕ್ರೋ ಫೈನಾನ್ಸ್ ದೌರ್ಜನ್ಯಗಳನ್ನು ತನಿಖೆ ನಡೆಸಲು ನೆಲ ಅಗೆಯಬೇಕಿಲ್ಲ.
ಚಿನ್ನಯ್ಯ ಅನಾಮಿಕರಾಗಿ ಬಂದು ದೂರು ನೀಡಿದ ಬಳಿಕ ಅಸಹಜ ಸಾವುಗಳಾದ ಶವಗಳನ್ನು ಹೂತ ಪ್ರಕರಣ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಯಿತೇ ವಿನಹ, ಅದು ಹೋರಾಟದ ಪ್ರಾರಂಭವಲ್ಲ.
ಚಿನ್ನಯ್ಯರ ದೂರೇ ಹೋರಾಟದ ಮುಖ್ಯವಸ್ತುವಲ್ಲ. ಎಡಪಂಥೀಯ, ದಲಿತ, ಸಮಾನತಾವಾದಿ, ಮಹಿಳಾ ಹೋರಾಟಗಾರರು, ಚಿಂತಕರು ಯಾವತ್ತೂ ಕೂಡಾ ಹೋರಾಟಕ್ಕೆ ಅಪರಿಚಿತವಾಗಿದ್ದ ಚಿನ್ನಯ್ಯ, ಸುಜಾತ ಭಟ್ ರವರ ಹಿಂದೆ ಹೋಗಿದ್ದಿಲ್ಲ. ‘ಅವರ ದೂರಿಗೂ ನ್ಯಾಯ ಒದಗಿಸಿ’ ಎಂಬುದಷ್ಟೇ ನಮ್ಮೆಲ್ಲರ ಹೇಳಿಕೆಯಾಗಿತ್ತು. ಹಾಗಾಗಿ, ಚಿನ್ನಯ್ಯ, ಸುಜಾತ ಭಟ್ ರವರುಗಳು ಯೂಟರ್ನ್ ಹೊಡೆದ್ರು ಎಂಬುದೆಲ್ಲಾ ಸಾವು, ದೌರ್ಜನ್ಯ, ಭೂ ಅಕ್ರಮ, ಫೈನಾನ್ಸ್ ದೌರ್ಜನ್ಯಗಳ ವಿರುದ್ಧದ ಹೋರಾಟದ ಮೇಲೆ ಪರಿಣಾಮ ಬೀರುವುದಿಲ್ಲ.
ಪದ್ಮಲತಾ, ವೇದವಲ್ಲಿ, ಆನೆ ಮಾವುತ ನಾರಾಯಣ, ಯಮುನಾ, ಸೌಜನ್ಯ ಸಾವುಗಳಿಗೆ ಉತ್ತರ ಕೊಡಬೇಕಾದವರು ಕೊಡಲೇಬೇಕಾಗುತ್ತದೆ. ನೂರಾರು ಅಸಹಜ ಸಾವು, ಕೊಲೆಯ ಶವಗಳ ಅಕ್ರಮ ದಫನಧರ್ಮಸ್ಥಳ ವ್ಯಾಪ್ತಿಯಲ್ಲಿ ಕಳೆದ 20 ವರ್ಷಗಳಲ್ಲಿ ನೂರಾರು ಅಸಹಜ ಸಾವುಗಳು, ಆತ್ಮಹತ್ಯೆಗಳು, ಕೊಲೆಗಳು ನಡೆದಿವೆ ಎಂದು ಚರ್ಚೆಗಳು ನಡೆಯುತ್ತಿದ್ದಂತೆ, ಧರ್ಮಸ್ಥಳ ಗ್ರಾಮ ಪಂಚಾಯತ್ ನೀಡಿರುವ ಮಾಹಿತಿ ಹಕ್ಕು ದಾಖಲೆಗಳು ನಮ್ಮ ಆತಂಕವನ್ನು ಇಮ್ಮಡಿಗೊಳಿಸಿದೆ.15 ವರ್ಷದ ಹೆಣ್ಣು ಮಗುವಿನ ಶವ ದೇವಸ್ಥಾನದ ಸ್ನಾನಘಟ್ಟದಲ್ಲಿ ಪತ್ತೆಯಾದ ದಿನವೇ ಪೋಸ್ಟ್ಮಾರ್ಟಂ ನಡೆಸಿ ಧಫನ ಮಾಡಲು ಗ್ರಾಮ ಪಂಚಾಯತ್ಗೆ ಪೊಲೀಸರು ಸೂಚಿಸಿದ್ದಾರೆ.
ಮೃತ ಹೆಣ್ಣು ಮಗುವಿನ ಪೊಷಕರ ಪತ್ತೆಗೆ ಪೊಲೀಸರು ಕಾನೂನಿನ ಯಾವ ಕ್ರಮವನ್ನೂ ಕೈಗೊಳ್ಳದೇ , ಕನಿಷ್ಠ ಒಂದೆರಡು ದಿನ ಕಾಯುವ ವ್ಯವದಾನವೂ ಇಲ್ಲದೇ ಶವ ಪತ್ತೆಯಾದ ದಿನವೇ ತರಾತುರಿಯಲ್ಲಿ ಕಾನೂನು ಮೀರಿ ದಫನ ಮಾಡಿರುವ ದಾಖಲೆ ಹಲವು ಅನುಮಾನಗಳನ್ನೂ, ಅಮಾನವೀಯತೆಯ ಬಗೆಗಿನ ಆಕ್ರೋಶವನ್ನೂ ತರಿಸುತ್ತದೆ. ಇನ್ನೊಂದು ದಾಖಲೆ ಹೇಳುವ ಪ್ರಕಾರ, ಸುಮಾರು 45 ವರ್ಷದ ಮಹಿಳೆಯನ್ನು ಧರ್ಮಸ್ಥಳ ದೇವಸ್ಥಾನದ ಶರಾವತಿ ಲಾಡ್ಜ್ನಲ್ಲಿ ಕೊಲೆ ಮಾಡಲಾಗಿದ್ದು, ಪೊಲೀಸರು ಆ ಮಹಿಳೆಯನ್ನು ಅಪರಿಚಿತೆ ಎಂದು ಘೋಷಿಸಿದ್ದಾರೆ. ವಸತಿಗೃಹದಲ್ಲಿ ಪತ್ತೆಯಾದ ಮಹಿಳೆಯ ಅಪರಿಚಿತೆ ಆಗಲು ಹೇಗೆ ಸಾದ್ಯ ? ಅದಲ್ಲದೇ, ಪತ್ತೆಯಾದ ಬಹುತೇಕ ಎಲ್ಲಾ ಶವಗಳನ್ನು ಹೂಳಲು ಸೂಚಿಸಿರುವ ಪೊಲೀಸರು, ಹೂಳಲೇಬೇಕಾದ ಕೊಲೆಯಾದ ಮಹಿಳೆಯ ಶವವನ್ನು ದಹನ ಮಾಡಲು ಸೂಚಿಸುತ್ತಾರೆ. ಗ್ರಾಮ ಪಂಚಾಯತ್ನವರು ಸಹಜವೆಂಬಂತೆಹೂತು ಹಾಕಬಹುದು ಎಂಬ ಕಾರಣಕ್ಕಾಗಿ ಪೊಲೀಸರು ದಫನ ಎಂದು ಬರೆದು ಆವರಣದಲ್ಲಿ ಸ್ಪಷ್ಟವಾಗಿ ದಹನ ಎಂದು ಬರೆಯುವ ಮೂಲಕ ಶವದ ಸಾಕ್ಷ್ಯ ನಾಶಮಾಡಿದ್ದಾರೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇಂತಹ ಹಲವು ದಾಖಲೆಗಳು ಆರ್ಟಿಐ ಮೂಲಕ ಅಧಿಕೃತವಾಗಿ ಲಭ್ಯವಾಗಿದ್ದು, ಎಸ್ಐಟಿ ರಚನೆಯ ಸಂಬಂಧ ಹೊರಡಿಸಲಾದ ಆದೇಶದಲ್ಲಿರುವ ನಿಯಮಗಳಂತೆ ಇವೆಲ್ಲವೂ ತನಿಖೆಯಾಗಬೇಕಿದೆ.
ಪದ್ಮಲತಾ ಪ್ರಕರಣ ಧರ್ಮಸ್ಥಳ ಗ್ರಾಮದ ಸಿಪಿಐಎಂ ಶಾಖಾ ಕಾರ್ಯದರ್ಶಿ ಎಂ ಕೆ ದೇವಾನಂದರ ಹದಿಹರೆಯದ ಪುತ್ರಿಯನ್ನು1986 ಡಿಸೆಂಬರ್ ತಿಂಗಳಲ್ಲಿ ಅಪಹರಿಸಿ ತಿಂಗಳ ತರುವಾಯ ನೆರಿಯಾ ಹೊಳೆಗೆ ಎಸೆದ ಪ್ರಕರಣದಲ್ಲಿ ಈ ವರೆಗು ನ್ಯಾಯ ಒದಗಿಸಿಲ್ಲ. ಆ ಸಂದರ್ಭ ಹೋರಾಟಗಳು ನಡೆದು ಸಿಐಡಿ ತನಿಖೆಗೆ ಪ್ರಕರಣವನ್ನು ಒಪ್ಪಿಸಿದರೂ, ಪ್ರಭಾವಗಳಿಗೆ ಮಣಿದು “ಪತ್ತೆಹಚ್ಚಲಾಗದ ಪ್ರಕರಣ ಎಂದು ವರದಿ ನೀಡಿ ಸಿಐಡಿ ಪ್ರಕರಣವನ್ನು ಮುಕ್ತಾಯಗೊಳಿಸಿತ್ತು. ಎಂ ಕೆ ದೇವಾನಂದರು ಹಲವರ ಹೆಸರು ಉಲ್ಲೇಖಿಸಿ ದೂರು ನೀಡಿದ್ದರೂ ಆ ನಿಟ್ಟಿನಲ್ಲಿ ತನಿಖೆ, ವಿಚಾರಣೆ ನಡೆದಿಲ್ಲ ಎಂಬುದು ಪದ್ಮಲತಾ ಕುಟುಂಬದ ಆರೋಪ. ಪದ್ಮಲತಾ ತಂದೆ ಎಂ ಕೆ ದೇವಾನಂದರು ಸ್ಥಳೀಯ ಫ್ಯೂಡಲ್ ಶಕ್ತಿಗಳ ಅಲಿಖಿತ ನಿಯವನ್ನು ಮುರಿದು ಮಂಡಲ ಪಂಚಾಯತ್ ಗೆ ಚುನಾವಣೆಗೆ ಸ್ಪರ್ಧಿಸಿದ್ದು, ಮಲೆಕುಡಿಯರ ಒಕ್ಕಲೆಬ್ಬಿಸುವಿಕೆಯ ವಿರುದ್ಧ ಚಳವಳಿ ಕಟ್ಟಿದ್ದು ಮಗಳ ಕೊಲೆಗೆ ಕಾರಣ ಎಂದು ದಿವಂಗತ ದೇವಾನಂದರು ಕೊನೆಯವರೆಗೂ ಹೇಳುತ್ತಾ ಬಂದಿರುತ್ತಾರೆ. ವೇದವಲ್ಲಿ ಪ್ರಕರಣ1979 ರಲ್ಲಿ ಧರ್ಮಸ್ಥಳ ಎಸ್ ಡಿ ಎಮ್ ಅನುದಾನಿತ ಹೈಸ್ಕೂಲಿನಲ್ಲಿ ಅಧ್ಯಾಪಕಿ ಯಾಗಿದ್ದ ವೇದವಲ್ಲಿ ಅವರ ಅನುಮಾನಾಸ್ಪದ ಸಾವು ಸಂಭವಿಸುತ್ತದೆ. ನ್ಯಾಯಯುತವಾಗಿ ದೊರಕಬೇಕಾದ ಮುಖ್ಯೋಪಾದ್ಯಾಯಿನಿ ಹುದ್ದೆಗೆ ಹಕ್ಕು ಮಂಡಿಸಿದ್ದಕ್ಕಾಗಿ ಊರಿನ ಫ್ಯೂಡಲ್ ಶಕ್ತಿಗಳು ವೇದವಲ್ಲಿಯವರನ್ನು ಬೆಂಕಿ ಹಚ್ಚಿ ಕೊಲೆ ನಡೆಸಿದರು ಎಂಬುದಾಗಿ ಆಕೆಯ ಕುಟುಂಬಸ್ಥರ ಆರೋಪ. ಆದರೆ, ಬಲಾಢ್ಯ ಶಕ್ತಿಗಳ ಪ್ರಭಾವದಿಂದಾಗಿ ಹೆಂಡತಿಯ ಕೊಲೆಗೆ ನ್ಯಾಯದೊರಕಬೇಕು ಎಂದು ಆಗ್ರಹಿಸಿದ ವೇದವಲ್ಲಿಯವರ ಪತಿ ಡಾ. ಹರಳೆಯರ ಮೇಲೆಯೆ ಸುಳ್ಳು ಆರೋಪ ಹೊರಿಸಿ ಜೈಲಿಗೆ ಹಾಕುವ ವಿಫಲ ಸಂಚು ನಡೆಸಲಾಗಿತ್ತು.
ಆ ಬಳಿಕ ವೇದವಲ್ಲಿ ಕೊಲೆ ಪ್ರಕರಣವನ್ನು ಆ ಮೂಲಕ ಮುಚ್ಚಿ ಹಾಕಲಾಯಿತು. ಮಾವುತ ನಾರಾಯಣ, ಸೋದರಿ ಯಮುನಾ ಕೊಲೆ2012 ಸೆಪ್ಟಂಬರ್ ನಲ್ಲಿ ಧರ್ಮಸ್ಥಳದಲ್ಲಿ ಆನೆಮಾವುತ ಆಗಿದ್ದ ನಾರಾಯಣ ಹಾಗು ಅವರ ಸಹೋದರಿಯನ್ನು ಕಲ್ಲಿನಿಂದ ಜಜ್ಜಿ ಕೊಲೆ ನಡೆಸಲಾಗುತ್ತದೆ. ಆ ಕೊಲೆ ಪ್ರಕರಣವನ್ನು ಪೊಲೀಸ್ ಇಲಾಖೆ ಪತ್ತೆಯಾಗದ ಪ್ರಕರಣ ಎಂದು ವರದಿ ನೀಡಿ ಮುಚ್ಚಿಹಾಕುತ್ತದೆ. ಆನೆ ಮಾವುತ ನಾರಾಯಣ ವಾಸ ಇದ್ದ ಜಮೀನಿನ ಮೇಲೆ ಊರಿನ ಪ್ರಭಾವಿಗಳಿಗೆ ಆಸಕ್ತಿ ಇತ್ತು. ಪ್ರಭಾವಿಗಳ ಒತ್ತಡಕ್ಕೆ ಮಣಿಯದ ಕಾರಣ ಈ ಜೋಡಿ ಕೊಲೆ ನಡೆದಿದೆ ಎಂದು ನಾರಾಯಣ ಕುಟುಂಬ ಅಂದಿನಿಂದಲೂ ಆರೋಪಿಸುತ್ತಾ ಬಂದಿದೆ. ಮಾವುತ ನಾರಾಯಣ ವಾಸ ಇದ್ದ ಜಮೀನಿನಲ್ಲಿ ಈಗ ಪ್ರಭಾವಿಗಳ ಭವ್ಯ ಕಟ್ಟಡ ತಲೆ ಎತ್ತಿರುವುದು ಆ ಆರೋಪವನ್ನು ಪುಷ್ಟೀಕರಿಸುತ್ತದೆ. ಸೌಜನ್ಯ ಕೊಲೆ2012 ರಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಪ್ರಕರಣದಲ್ಲಿ ಸಿಬಿಐ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಆರೋಪಿಯಾಗಿದ್ದ ಸಂತೋಷ್ ರಾವ್ ರನ್ನು ನ್ಯಾಯಾಲಯ ನಿರಪರಾಧಿ ಎಂದು ಬಿಡುಗಡೆಗೊಳಿಸಿದೆ.
ಆ ಮೂಲಕ ಸೌಜನ್ಯ ಕುಟುಂಬ ಹಾಗು ಜನಾಭಿಪ್ರಾಯಕ್ಕೆ ನ್ಯಾಯಲಯದಲ್ಲಿ ಮನ್ನಣೆ ದೊರಕಿದೆ. ಅಂದಿನಿಂದ ಸೌಜನ್ಯ ಕುಟುಂಬ ಹಾಗು ಜನ ಚಳವಳಿಗಳು, ನಾಗರಿಕ ಸಮಾಜ ಸೌಜನ್ಯ ಪ್ರಕರಣದ ಮರು ತನಿಖೆಗೆ ಬಲವಾದ ಆಗ್ರಹ ಮಾಡುತ್ತಲೆ ಬಂದಿವೆ. ಮೇಲ್ಕಾಣಿಸಿದ ಎಲ್ಲಾ ಅಪಹರಣ, ಅತ್ಯಾಚಾರ, ಕೊಲೆಪ್ರಕರಣಗಳನ್ನು ಈಗ ರಚಿಸಿರುವ SIT ತನಿಖೆಯ ವ್ಯಾಪ್ತಿಗೆ ತರಬೇಕು. ಅದು ಸಾಧ್ಯವಿಲ್ಲದಿದ್ದರೆ ಪತ್ತೆಯಾಗದ ಈ ಪ್ರಕರಣಗಳ ತನಿಖೆಗೆ ಪ್ರತ್ಯೇಕ ತನಿಖಾ ತಂಡ ರಚಿಸಬೇಕು ಎಂದು ನಾವು ಆಗ್ರಹಿಸುತ್ತೇವೆ. ದಲಿತ ಕಾರ್ಮಿಕರ ಮನೆ ಭೂಮಿ ಹಕ್ಕುಧರ್ಮಸ್ಥಳದಲ್ಲಿ ನೂರಾರು ದಲಿತರು ಸ್ವಚ್ಚತಾ ಕಾರ್ಮಿಕರಾಗಿ ತಲೆತಲಾಂತರಗಳಿಂದ ದುಡಿಯುತ್ತಿದ್ದಾರೆ. ಈ ರೀತಿ ದುಡಿಯುವ ಸ್ವಚ್ಚತಾ ಕಾರ್ಮಿಕರಿಗೆಂದೇ ಧರ್ಮಸ್ಥಳದಲ್ಲಿ ಅಶೋಕ ನಗರ ದಲಿತ ಕಾಲನಿಯನ್ನು ನಿರ್ಮಿಸಲಾಗಿದೆ.
ರಾಜ್ಯಸಭಾ ಸಂಸದರೂ ಆಗಿರುವ ವಿರೇಂದ್ರ ಹೆಗ್ಗಡೆಯವರ ಬೀಡು ಮನೆಯ ಸನಿಹವೇ ಇರುವ ಈ ದಲಿತ ಕಾಲನಿಯ ನಿವಾಸಿಗಳ ಸಂಕಷ್ಟ ಹೇಳತೀರದು. ತಲೆತಲಾಂತರಗಳಿಂದ ಅಶೋಕನಗರದಲ್ಲೇ ವಾಸಿಸುತ್ತಿದ್ದರೂ ಇನ್ನೂ ಮನೆಯ ಅಡಿಸ್ಥಳವನ್ನು ದಲಿತರ ಹೆಸರಿಗೆ ಹಕ್ಕು ಪತ್ರ ನೀಡಲಾಗಿಲ್ಲ. ಸ್ವಚ್ಚತಾ ಕಾರ್ಮಿಕರು ಕುಸಿದಿರುವ, ತೂತಾಗಿರುವ ಮನೆಗಳಲ್ಲಿ ಹೀನಾಯ ಸ್ಥಿತಿಯಲ್ಲಿ ವಾಸಿಸುತ್ತಿದ್ದಾರೆ. ನಮ್ಮ ಸಂಸ್ಥೆಯಲ್ಲಿ 75 ಸಾವಿರ ನೌಕರರು ಇದ್ದಾರೆ ಎಂದು ನ್ಯಾಯಾಲಯಗಳಲ್ಲಿ ಘೋಷಿಸಿಕೊಂಡಿದ್ದಾರೆ. ಧರ್ಮಸ್ಥಳ ಅಶೋಕನಗರದ 128 ದಲಿತ ಕುಟುಂಬಗಳು, ಮುಂಡ್ರುಪಾಡಿಯ 42 ದಲಿತ ಕುಟುಂಬಗಳು ಮತ್ತು ಗ್ರಾಮದ ಇತರ ದಲಿತ ಕುಟುಂಬಗಳಿಗೆ ತಲಾ ಒಂದು ಎಕ್ರೆ ಸರಕಾರಿ ಭೂಮಿಯನ್ನು ಸರ್ಕಾರ ಕೊಡಿಸಬೇಕು. ದಲಿತರ ಮೀಸಲು ಭೂಮಿಯೂ ಸೇರಿದಂತೆ ನೂರಾರು ಎಕ್ರೆ ಸರಕಾರಿ ಭೂಮಿಯನ್ನು ಟ್ರಸ್ಟ್ ಅತಿಕ್ರಮಿಸಿದ್ದು, ಇದನ್ನು ತೆರವುಗೊಳಿಸಿ ಭೂಮಂಜೂರಾತಿ ಕಾಯ್ದೆ ಪ್ರಕಾರವೇ ದಲಿತರಿಗೆ ಕೊಡಬೇಕು.
ಈ ಬಗ್ಗೆ ನಿರಂತರ ಹೋರಾಟ ನಡೆಸುತ್ತಿರುವ ‘ದಲಿತರ ಭೂಹಕ್ಕೊತ್ತಾಯ ಸಮಿತಿ’ಯ ಜೊತೆ ನಾವಿದ್ದೇವೆ. ಭೂಕಬಳಿಕೆಧರ್ಮಸ್ಥಳ ಹಾಗು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಕಬಳಿಕೆ ಪ್ರಕರಣಗಳು ವ್ಯಾಪಕವಾಗಿ ನಡೆದಿರುವ ಆರೋಪ ನಾಲ್ಕೈದು ದಶಕಗಳಿಂದ ವ್ಯಾಪಕವಾಗಿ ಕೇಳಿ ಬರುತ್ತಿದೆ. ಅಲ್ಲಿ ನಡೆದಿರುವ ಕೊಲೆ ಸಹಿತ ಅಪರಾಧ ಪ್ರಕರಣಗಳನ್ನು ಭೂ ಹಗರಣಗಳಿಂದ ಪ್ರತ್ಯೇಕಿಸಿ ನೋಡಲು ಸಾಧ್ಯವಾಗದು. ಸರಕಾರಿ ಜಮೀನುಗಳ ಕಬಳಿಕೆ, ದಲಿತರು, ಆದಿವಾಸಿಗಳು, ಹಿಂದುಳಿದವರು ಸಹಿತ ದುರ್ಬಲ ವಿಭಾಗದ ಜನರನ್ನು ಬಲವಂತವಾಗಿ ಒಕ್ಕಲೆಬ್ಬಿಸಿದ, ಅವರ ಜಮೀನು ಸ್ವಾಧೀನ ಪಡಿಸಿದ ಆರೋಪಗಳು ಹಲವಾರು ಇವೆ. ಹಾಗೆಯೆ, ಜಮೀನು ಹೊಂದಿರುವ ಹಲವರು ಭಯದಿಂದ ಕೃಷಿ ಚಟುವಟಿಕೆಯನ್ನು ಕೈ ಬಿಟ್ಟು ಊರಿನಿಂದಲೆ ದೂರ ಉಳಿದಿರುವ ಮಾತುಗಳು ಕೇಳಿ ಬರುತ್ತಿವೆ.
ಧರ್ಮಸ್ಥಳ ಹಾಗು ಆಸುಪಾಸಿನ ಗ್ರಾಮದಲ್ಲಿ ನಾಲ್ಕೈದು ದಶಕದಲ್ಲಿ ನಡೆದಿರುವ ಜಮೀನು ಪರಭಾರೆಯನ್ನೂ ಸೇರಿಸಿ, ಭೂಕಬಳಿಕೆ ಆರೋಪಗಳನ್ನು ಸಮಗ್ರವಾದ ತನಿಖೆಗೆ ಒಳಪಡಿಸಬೇಕಿದೆ. ದಲಿತರ ಮೀಸಲು ಭೂಮಿ ಕಬಳಿಕೆಧರ್ಮಸ್ಥಳದ ಪ್ರಭಾವಿಗಳ ಟ್ರಸ್ಟ್ ನಡೆಸುತ್ತಿರುವ ಲಾಭದಾಯಕ ಶಿಕ್ಷಣ ಸಂಸ್ಥೆಗಳಿಗೆ ದಲಿತರಿಗೆ ಮೀಸಲಾಗಿರುವ ಡೀಸಿ ಮನ್ನ (DEPRESSED CLASS RESERVE) ಜಮೀನನ್ನು ಸರ್ಕಾರ ನೀಡಿದೆ. ಉಜಿರೆ ಗ್ರಾಮದಲ್ಲಿ ವಿವಿಧ ಸರ್ವೆ ನಂಬರ್ಗಳಲ್ಲಿ 43.90 ಎಕ್ರೆ ಡಿ.ಸಿ ಮನ್ನಾ(ತುಳಿತಕ್ಕೊಳಗಾದ ವರ್ಗಕ್ಕೆ ಮೀಸಲು) ಭೂಮಿಯನ್ನು ಧರ್ಮಸ್ಥಳ ಎಜುಕೇಶನಲ್ ಟ್ರಸ್ಟ್ ಮತ್ತು ಸಿದ್ಧವನ ಗುರುಕುಲಕ್ಕೆ ನೀಡಲಾಗಿದೆ. ಈ ಬಗ್ಗೆ ಪದೇ ಪದೇ ವಿವಿಧ ದಲಿತ ಸಂಘಟನೆಗಳು, ಎಡ ಸಂಘಟನೆಗಳು ಒತ್ತಾಯಿಸುತ್ತಾ ಬಂದಿವೆ. ಆ ಭೂಮಿಯನ್ನು ತಕ್ಷಣ ದಲಿತ ಸಮುದಾಯಕ್ಕೆ ನೀಡಬೇಕು. ಒಂದು ವೇಳೆ ಅದೇ ಭೂಮಿಯನ್ನು ನೀಡಲು ಅಸಾದ್ಯವಾದರೆ ಬದಲಿ ಯೋಗ್ಯ ಭೂಮಿಯನ್ನು ಸರ್ಕಾರವು ಸಂಸ್ಥೆಯಿಂದ ವಶಕ್ಕೆ ಪಡೆದು ದಲಿತ ಸಮುದಾಯಕ್ಕೆ ಹಂಚುವ ವ್ಯವಸ್ಥೆ ಮಾಡಬೇಕು. ಉಜಿರೆಯ ಮುಖ್ಯರಸ್ತೆಯಲ್ಲಿರುವ ವಿವಿಧ ಸರ್ವೆ ನಂಬರ್ಗಳಲ್ಲಿ 42.05 ಎಕ್ರೆ ಸರ್ಕಾರಿ ಭೂಮಿಯನ್ನು ಶ್ರೀ ಧರ್ಮಸ್ಥಳ ಎಜುಕೇಶನ್ ಟ್ರಸ್ಟ್ಗೆ 2000 ನೇ ವರ್ಷದಿಂದ 2020 ರವರೆಗೆ ಅಂದರೆ 30 ವರ್ಷದ ಲೀಸ್ಗೆ ಎಕ್ರೆವೊಂದರ ವಾರ್ಷಿಕ ರೂ.420/-ರಂತೆ ಲೀಸ್ಗೆ ನೀಡಲಾಗಿದೆ. ಎಕರೆಗೆ 25 ಲಕ್ಷ ರೂ ನೀಡಿದರೂ ಜಮೀನು ಸಿಗದ ಮುಖ್ಯರಸ್ತೆಯ ಬದಿಯ ಭೂಮಿಯನ್ನು ಪುಕ್ಕಟೆ ಧರಕ್ಕೆ ನೀಡಲಾಗಿದ್ದು, ಅವಧಿಪೂರ್ವ ಈ ಒಪ್ಪಂದವನ್ನು ರದ್ದುಗೊಳಿಸಿ, ಅರ್ಹ ಭೂರಹಿತರಿಗೆ ಭೂಮಿಯನ್ನು ಹಂಚಬೇಕು.
ಮೈಕ್ರೊ ಫೈನಾನ್ಸ್ ಹಗರಣಗಳ ತನಿಖೆಗ್ರಾಮೀಣಾಭಿವೃದ್ದಿ ಯೋಜನೆಯ ಹೆಸರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಅಪರಾಧ ನಡೆದಿರುವುದು, ಮೈಕ್ರೊ ಫೈನಾನ್ಸ್ ನಡೆಸಿರುವ ಆರೋಪಗಳು ವ್ಯಾಪಕವಾಗಿದೆ. ಸಾಲ ನೀಡಿಕೆ, ವಸೂಲಾತಿ ವಿಧಾನದಲ್ಲಿ ಕಾನೂನು, ನಿಯಮಗಳನ್ನು ಉಲ್ಲಂಘಿಸುವುದು, ತೀರಾ ಅವಮಾನಕಾರಿಯಾಗಿ, ಅಮಾನವೀಯವಾಗಿ ವಸೂಲಾತಿ ನಡೆಸುವ ದೂರುಗಳು ರಾಜ್ಯದ ಹಲವು ಭಾಗಗಳಲ್ಲಿ ಕೇಳಿಬಂದಿವೆ. ವಸೂಲಾತಿಯ ಸಂದರ್ಭದ ಅಪಮಾನ, ಹಿಂಸೆ ಭರಿಸಲಾಗದೆ ಆತ್ಮಹತ್ಯೆಗಳು ಘಟಿಸಿರುವುದು, ಮರ ಮಟ್ಟು ಸಹಿತ ಅವರ ಸ್ವತ್ತುಗಳನ್ನು ಬಲವಂತವಾಗಿ ಸ್ವಾಧೀನ ಪಡಿಸಿರುವ ಪ್ರಕರಣಗಳು ಹತ್ತಾರು ಸಂಖ್ಯೆಯಲ್ಲಿ ನಡೆದಿದೆ. ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಇವು ಗಂಭೀರವಾದ ಆರ್ಥಿಕ ಅಪರಾಧಗಳಾಗಿವೆ.
ಗ್ರಾಮೀಣ ಭಾಗದಲ್ಲಿ ಶ್ರಮಿಕ ಜನರ, ಕೂಲಿಕಾರರ, ಸಣ್ಣ ರೈತರು ಸೇರಿದಂತೆ ಜನ ಸಾಮಾನ್ಯರ ನೆಮ್ಮದಿಗೆ ಭಂಗ ತಂದಿದೆ. ಈ ಕುರಿತು ಸರಿಯಾದ ತನಿಖೆ ಅಗತ್ಯ ಇದೆ. ಸಂತ್ರಸ್ತರ ಪರವಾಗಿ ಕೆಲಸ ಮಾಡುವುದು ಸರ್ಕಾರದ ಸಾಂವಿಧಾನಿಕ ಕರ್ತವ್ಯವಾಗಿದೆ. ಸರ್ಕಾರ ಮಾಡಬೇಕಿರುವ ಕೆಲಸವನ್ನು ಜನಪರ ಹೋರಾಟಗಾರರು ಮಾಡುತ್ತಿದ್ದಾರೆ. ಆದರೆ ಸರ್ಕಾರದ ಕೆಲ ಪ್ರಭಾವಿಗಳು ಮತ್ತು ಪೊಲೀಸರು ಹೋರಾಟಗಾರರ ವಿರುದ್ಧ ಪ್ರಕರಣ ದಾಖಲಿಸುವ ಬೆದರಿಕೆ ಒಡ್ಡುವ ಮೂಲಕ ದೂರುದಾರರ, ಸಂತ್ರಸ್ತರ ಧ್ವನಿ ಅಡಗಿಸಲು ಪ್ರಯತ್ನಿಸುತ್ತಿದ್ದಾರೆ. ದೂರುದಾರನ ಹೇಳಿಕೆಯಷ್ಟು ಅಸ್ತಿಪಂಜರ ಸಿಕ್ಕಿಲ್ಲ, ಆತ ಯೂಟರ್ನ್ ಹೊಡೆದ ಎನ್ನುವುದು ಮುಖ್ಯವಾಗೂಡದು. ಕನಿಷ್ಠ 20 ವರ್ಷಗಳ ಅಸಹಜ ಸಾವು ಪ್ರಕರಣಗಳನ್ನು ಠಾಣೆ, ಗ್ರಾಮ ಪಂಚಾಯತ್ ದಾಖಲೆಗಳ ಆಧಾರದಲ್ಲಿ ತನಿಖೆಯನ್ನು ತೀವ್ರಗೊಳಿಸಬೇಕು. ಹೀಗಾಗಿ ಕಳೆದ 20 ವರ್ಷಗಳ ಅತ್ಯಾಚಾರ, ಅಸಹಜ ಸಾವು, ಕೊಲೆ ಪ್ರಕರಣಗಳನ್ನು ಎಸ್ಐಟಿ ರಚನೆಯ ಸಂಬಂಧ ಹೊರಡಿಸಲಾದ ಆದೇಶದಲ್ಲಿ ಇರುವಂತೆಯೇ ಪರಿಪೂರ್ಣವಾದ ತನಿಖೆಗೆ ಒಳಪಡಿಸಬೇಕು. ಪದ್ಮಲತಾ, ವೇದದಲ್ಲಿ, ಮಾವುತ ನಾರಾಯಣ, ಯಮುನ, ಸೌಜನ್ಯ ಕೊಲೆ ಪ್ರಕರಣಗಳು, ಭೂಕಬಳಿಕೆ, ಮೈಕ್ರೊ ಫೈನಾನ್ಸ್ ದೌರ್ಜನ್ಯಗಳು, ದಲಿತರ ಮೀಸಲು ಭೂಮಿ ಕಬಳಿಕೆ, ಆರ್ಥಿಕ ಅಪರಾಧದ ಆರೋಪದ ಪ್ರಕರಣಗಳನ್ನು ಈಗ ರಚಿಸಲಾಗಿರುವ SIT ಗೆ ವಹಿಸಲು ಸಮಸ್ಯೆಗಳಿದ್ದಲ್ಲಿ ಪ್ರತ್ಯೇಕವಾದ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆಗೆ ಒಳಪಡಿಸಬೇಕು ಎಂದು ನಾವು ಆಗ್ರಹಿಸುತ್ತಿದ್ದೇವೆ. ನಮ್ಮ ಈ ಆಗ್ರಹಗಳ ಮೇಲೆ ಮುಸುಕುದಾರಿ ಚಿನ್ನಯ್ಯ ಪ್ರಕರಣ ಪರಿಣಾಮ ಬೀರುವುದಿಲ್ಲ.

