ಪ್ರಧಾನ ಮಂತ್ರಿ ಪೋಷಣ್ ಶಕ್ತಿ ಯೋಜನೆ ಅಡಿಯಲ್ಲಿ ರಾಜ್ಯದ 9,337 ಶಾಲೆಗಳ ಅಡುಗೆ ಮನೆಗಳಿಗೆ 21.55 ಕೋಟಿ ರೂ. ಅನುದಾನ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ಯೋಜನೆ ಅಡಿಯಲ್ಲಿ ರಾಜ್ಯದ 9,337 ಶಾಲೆಗಳ ಅಡುಗೆ ಮನೆಗಳಿಗೆ 21.55 ಕೋಟಿ ರೂ. ಅನುದಾನ
ಬೆಂಗಳೂರು:
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ಯೋಜನೆಯಡಿ ರಾಜ್ಯದ 9,337 ಸರ್ಕಾರಿ ಶಾಲೆಗಳ ಅಡುಗೆ ಮನೆಗಳನ್ನು ಆಧುನೀಕರಿಸಲು ಸರ್ಕಾರ 21.55 ಕೋಟಿ ರೂ. ಅನುದಾನ ಬಿಡುಗಡೆಗೆ ಅನುಮೋದನೆ ನೀಡಿದೆ.
ಶಾಲೆಗಳಲ್ಲಿ ಹಾಗೂ ಸ್ವಯಂಸೇವಾ ಸಂಸ್ಥೆಗಳ ಮೂಲಕ ಬಿಸಿಯೂಟ ತಯಾರಿಸಲು ಈವರೆಗೆ ಅಲ್ಯುಮಿನಿಯಂ ಪಾತ್ರೆಗಳನ್ನು ಬಳಸಲಾಗುತ್ತಿತ್ತು. ಆದರೆ ಇವು ದೀರ್ಘಾವಧಿಯಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಅಲ್ಯುಮಿನಿಯಂ ಪಾತ್ರೆಗಳ ಬಳಕೆಯನ್ನು ಹಂತ ಹಂತವಾಗಿ ಕಡಿಮೆ ಮಾಡಲು ಸೂಚನೆ ನೀಡಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು 2025-26ನೇ ಸಾಲಿನ ಬಜೆಟ್ನಲ್ಲಿ ಘೋಷಿಸಿದಂತೆ, ಆಯ್ದ 9,337 ಶಾಲೆಗಳಿಗೆ ಹೊಸ ಸ್ಟೈನ್ಲೆಸ್ ಸ್ಟೀಲ್ ಪಾತ್ರೆಗಳು ಹಾಗೂ ಇತರೆ ಅಡುಗೆ ಪರಿಕರಗಳನ್ನು ಖರೀದಿಸಲು ಕ್ರಮ ಕೈಗೊಂಡಿದೆ.
ಒಟ್ಟು 21.55 ಕೋಟಿ ರೂ. ಅನುದಾನವನ್ನು ಕ್ಷೀರಭಾಗ್ಯ ಯೋಜನೆಯ ಅನುದಾನದಿಂದ ಬಿಡುಗಡೆ ಮಾಡಲಾಗುತ್ತಿದ್ದು, ಅದರಲ್ಲೂ—
7,086 ಶಾಲೆಗಳಿಗೆ (ಬೆಂಗಳೂರು ನಗರ ಮತ್ತು ಧಾರವಾಡ ಹೊರತುಪಡಿಸಿ) ಅಕ್ಕಿ ಬೇಯಿಸಲು ಹಾಗೂ ತೊಗರಿಬೇಳೆ ಸಾಂಬಾರು ತಯಾರಿಸಲು ಸ್ಟೈನ್ಲೆಸ್ ಸ್ಟೀಲ್ ಪಾತ್ರೆಗಳ ಖರೀದಿಗೆ ₹12.60 ಕೋಟಿ ರೂ.
2,251 ಶಾಲೆಗಳಿಗೆ (ಬೆಂಗಳೂರು ನಗರ ಮತ್ತು ಧಾರವಾಡ ಜಿಲ್ಲೆಗಳಲ್ಲಿ) ಮೊಟ್ಟೆ ಬೇಯಿಸಲು, ಎಲ್ಪಿಜಿ ಅನಿಲ ಸಂಪರ್ಕ ಹಾಗೂ ಇತರೆ ಅಡುಗೆ ಪರಿಕರಗಳ ಖರೀದಿಗೆ ₹8.95 ಕೋಟಿ ರೂ.
ಈ ಯೋಜನೆಯ ಮೂಲಕ ಶಾಲಾ ಮಕ್ಕಳಿಗೆ ಸ್ವಚ್ಛ, ಸುರಕ್ಷಿತ ಹಾಗೂ ಪೌಷ್ಟಿಕ ಆಹಾರ ತಯಾರಿಸಲು ಅಗತ್ಯ ಮೂಲಸೌಕರ್ಯವನ್ನು ಬಲಪಡಿಸುವ ಉದ್ದೇಶ ಸರ್ಕಾರದದು ಎಂದು ಶಾಲಾ ಶಿಕ್ಷಣ ಇಲಾಖೆ ತಿಳಿಸಿದೆ.

