ಸುದ್ದಿ 

ಮದುವೆಯಾದ 9 ತಿಂಗಳಲ್ಲೇ ವರದಕ್ಷಿಣೆ ಕಿರುಕುಳಕ್ಕೆ ಯುವತಿಯ ಬಲಿ!

Taluknewsmedia.com

ಮದುವೆಯಾದ 9 ತಿಂಗಳಲ್ಲೇ ವರದಕ್ಷಿಣೆ ಕಿರುಕುಳಕ್ಕೆ ಯುವತಿಯ ಬಲಿ!

ದೊಡ್ಡಬಳ್ಳಾಪುರ: ಮದುವೆಯಾದ ಕೇವಲ ಒಂಬತ್ತು ತಿಂಗಳಲ್ಲೇ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಬಳಿಯ ವಿಶ್ವೇಶ್ವರಯ್ಯ ಪಿಕ್‌ಅಪ್‌ ಡ್ಯಾಂ ಹತ್ತಿರ ನಡೆದಿದೆ. 28 ವರ್ಷದ ಪುಷ್ಪಾ ಆತ್ಮಹತ್ಯೆಗೆ ಶರಣಾದ ದುರ್ಘಟಿತೆ.

ಮೃತಳಾದ ಪುಷ್ಪಾ ತಪಸೀಹಳ್ಳಿ ಗ್ರಾಮದ ವೇಣು ಎಂಬುವವರ ಪತ್ನಿ. ಒಂದೂವರೆ ವರ್ಷಗಳ ಹಿಂದೆ ಇವರ ವಿವಾಹ ನಡೆದಿತ್ತು. ಆದರೆ ಮದುವೆಯ ನಂತರದಿಂದಲೇ ಪತಿ, ಅತ್ತೆ, ಮಾವ ಹಾಗೂ ಇತರ ಕುಟುಂಬಸ್ಥರಿಂದ ವರದಕ್ಷಿಣೆ ಮತ್ತು ನಿವೇಶನಕ್ಕಾಗಿ ನಿರಂತರ ಕಿರುಕುಳ ಎದುರಿಸುತ್ತಿದ್ದಳೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಆತ್ಮಹತ್ಯೆಗೆ ಮೊದಲು ಪುಷ್ಪಾ ಸೆಲ್ಫಿ ವಿಡಿಯೋ ಮಾಡಿ ತನ್ನ ಜೀವ ತ್ಯಾಗದ ನಿರ್ಧಾರವನ್ನು ದಾಖಲಿಸಿರುವುದು ಘಟನೆಗೆ ಮತ್ತಷ್ಟು ಭಾರಿತನ ನೀಡಿದೆ. ವಿಡಿಯೋದಲ್ಲಿ ಪುಷ್ಪಾ ಪತಿಯ ಕುಟುಂಬದವರು ನೀಡಿದ ಕಿರುಕುಳ ಮತ್ತು ಅವಮಾನವನ್ನು ವಿವರಿಸಿದ್ದಾಳೆ ಎನ್ನಲಾಗಿದೆ.

ಮದುವೆಯಾದ ಬಳಿಕ ಪತಿ ಅವಳೊಂದಿಗೆ ಸಂಸಾರ ನಡೆಸದೇ ದೂರವಿದ್ದು, “ಮಗು ಬೇಕಾದರೆ ಮೈದುನ ಜೊತೆ ಮಲಗು” ಎಂಬ ನಿಂದನೀಯ ಮಾತುಗಳನ್ನು ಅತ್ತೆ–ಮಾವ ಹೇಳಿದ್ದರಂತೆ ಎಂಬ ಆರೋಪವೂ ಕೇಳಿಬಂದಿದೆ.

ಕಿರುಕುಳ ತಾಳಲಾರದೇ ಮನಸ್ಸು ಬೇಸತ್ತುಕೊಂಡ ಪುಷ್ಪಾ, ವಿಶ್ವೇಶ್ವರಯ್ಯ ಪಿಕ್‌ಅಪ್‌ ಡ್ಯಾಂಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಂಬಂಧ ದೊಡ್ಡಬಳ್ಳಾಪುರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Related posts