ಸಾಗರದಲ್ಲಿ ನಕಲಿ ಯೂಟ್ಯೂಬರ್ಸ್ ಅಟ್ಟಹಾಸ – ಪತ್ರಕರ್ತರ ಸಂಘದಿಂದ ಕಠಿಣ ಕ್ರಮಕ್ಕೆ ಒತ್ತಾಯ
ಸಾಗರದಲ್ಲಿ ನಕಲಿ ಯೂಟ್ಯೂಬರ್ಸ್ ಅಟ್ಟಹಾಸ – ಪತ್ರಕರ್ತರ ಸಂಘದಿಂದ ಕಠಿಣ ಕ್ರಮಕ್ಕೆ ಒತ್ತಾಯ
ಸಾಗರ: ನಕಲಿ ಯೂಟ್ಯೂಬರ್ಗಳ ಬ್ಲ್ಯಾಕ್ಮೇಲ್ ಅಟ್ಟಹಾಸದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸಾಗರ ಶಾಖೆ ವತಿಯಿಂದ ಗುರುವಾರ ಪೊಲೀಸ್ ಉಪಾಧೀಕ್ಷಕ ಡಾ. ಬೆನಕ ಪ್ರಸಾದ್ ಅವರಿಗೆ ಮನವಿ ಸಲ್ಲಿಸಲಾಯಿತು.
ಇತ್ತೀಚಿನ ದಿನಗಳಲ್ಲಿ “ಯೂಟ್ಯೂಬ್ ಪತ್ರಕರ್ತ” ಎಂದು ಹೇಳಿಕೊಂಡು ಅಕ್ರಮ ಚಟುವಟಿಕೆ ನಡೆಸುವವರ ಸಂಖ್ಯೆ ತೀವ್ರವಾಗಿ ಏರಿದೆ. ಯೂಟ್ಯೂಬ್ ಚಾನಲ್ ಹೆಸರಿನಲ್ಲಿ ಕೆಲವರು ಬ್ಲ್ಯಾಕ್ಮೇಲ್, ಹಣದ ವಸೂಲಿ ಮತ್ತು ಬೆದರಿಕೆ ಕೃತ್ಯಗಳಲ್ಲಿ ತೊಡಗಿರುವುದು ಸಂಘದ ಗಮನಕ್ಕೆ ಬಂದಿದೆ. ಇವರಿಗೆ ನಿಜವಾದ ಪತ್ರಕರ್ತತ್ವ ಅಥವಾ ಪತ್ರಕರ್ತರ ಸಂಘದೊಂದಿಗೆ ಯಾವುದೇ ನಂಟಿಲ್ಲ ಎಂದು ಮನವಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ಲೇಔಟ್ ಮಾಲೀಕರು, ಉದ್ಯಮಿಗಳು, ಸರ್ಕಾರಿ ಅಧಿಕಾರಿಗಳು, ಶಿಕ್ಷಕರು ಇಂತಹ ನಕಲಿ ಪತ್ರಕರ್ತರ ಬಲಿಯಾಗುತ್ತಿದ್ದಾರೆ. “ನಿಮ್ಮ ವಿರುದ್ಧ ಯೂಟ್ಯೂಬ್ನಲ್ಲಿ ಸುದ್ದಿ ಹಾಕುತ್ತೇವೆ” ಎಂದು ಬೆದರಿಕೆ ಹಾಕಿ ಹಣ ವಸೂಲಿ ಮಾಡುವ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ.
ಪತ್ರಕರ್ತರ ಸಂಘದವರು ಇಂತಹ ಕೃತ್ಯಗಳನ್ನು ನಿಲ್ಲಿಸಲು ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ. ನಕಲಿ ಯೂಟ್ಯೂಬರ್ಗಳು ಹಾಗೂ ಪ್ರೆಸ್ ಬೋರ್ಡ್ ಹಾಕಿಕೊಂಡು ವಾಹನಗಳಲ್ಲಿ ತಿರುಗುವವರ ಮೇಲೆ ಕಣ್ಗಾವಲು ಇರಿಸಿ, ಅಧಿಕೃತ ಗುರುತಿನ ಚೀಟಿಯಿಲ್ಲದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸಂಘದ ಅಧ್ಯಕ್ಷ ಜಿ. ನಾಗೇಶ್, ಕಾರ್ಯದರ್ಶಿ ಮಹೇಶ್ ಹೆಗಡೆ, ಉಪಾಧ್ಯಕ್ಷ ಲೋಕೇಶ್ ಕುಮಾರ್, ಖಜಾಂಚಿ ಎಂ.ಜಿ. ರಾಘವನ್, ಜಿಲ್ಲಾ ಕಾರ್ಯದರ್ಶಿ ದೀಪಕ್ ಸಾಗರ್, ಪ್ರಮುಖರಾದ ಗಿರೀಶ್ ರಾಯ್ಕರ್, ಇಮ್ರಾನ್ ಸಾಗರ್, ಸತ್ಯನಾರಾಯಣ ಹಾಗೂ ಇತರ ಸದಸ್ಯರು ಮನವಿ ವೇಳೆ ಉಪಸ್ಥಿತರಿದ್ದರು.

