ಹಳೆಯ ಮರದ ರೆಂಬೆ ಬಿದ್ದು ಯುವಕನ ದುರ್ಮರಣ: ಅಧಿಕಾರಿಗಳ ನಿರ್ಲಕ್ಷ್ಯತೆ ವಿರುದ್ಧ ಕುಟುಂಬಸ್ತರ ಆಕ್ರೋಶ ..
ಹಳೆಯ ಮರದ ರೆಂಬೆ ಬಿದ್ದು ಯುವಕನ ದುರ್ಮರಣ: ಅಧಿಕಾರಿಗಳ ನಿರ್ಲಕ್ಷ್ಯತೆ ವಿರುದ್ಧ ಕುಟುಂಬಸ್ತರ ಆಕ್ರೋಶ ..
ನಗರದ ಬಿ.ಎಸ್.ಕೆ 1ನೇ ಹಂತದ ಅಶೋಕನಗರದ 16ನೇ ಮೈನ್ರೋಡ್ ಬಳಿ ನಡೆದ ದುರ್ಘಟನೆಯಲ್ಲಿ 29 ವರ್ಷದ ಯುವಕ ಅಕ್ಷಯ್ ಎಂ.ಎಸ್ ಸಾವಿಗೀಡಾಗಿರುವ ದುರಂತ ಘಟನೆ ನಡೆದಿದೆ. ಈ ಘಟನೆಗೆ ಕಾರಣ ಬಿಬಿಎಂಪಿ ಅರಣ್ಯ ವಿಭಾಗದ ಅಧಿಕಾರಿಗಳ ನಿರ್ಲಕ್ಷ್ಯತೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಅಕ್ಷಯ್ ಅವರು ದಿನಾಂಕ 15/06/2025 ರಂದು ಭಾನುವಾರ ಮಧ್ಯಾಹ್ನ 12.30ರ ಸುಮಾರಿಗೆ ಮಾಂಸ ಖರೀದಿಸಲು ತನ್ನ ಸ್ಕೂಟರ್ನಲ್ಲಿ ಹೊರಟಿದ್ದಾಗ, ಬ್ರಹ್ಮ ಚೈತನ್ಯ ಮಂದಿರದ ಬಳಿ ರಸ್ತೆ ಪಕ್ಕದಲ್ಲಿರುವ ಹಳೆಯ ಮರದ ಒಣಗಿದ ರೆಂಬೆ ಅವರ ತಲೆಯ ಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಜಯನಗರದಲ್ಲಿರುವ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಅವರು ದಿನಾಂಕ 19/06/2025 ರಂದು ಮಧ್ಯಾಹ್ನ 1 ಗಂಟೆಗೆ ನಿಧನರಾದರು.
ಮೃತನ ಸಹೋದರ ಬೆನಕ್ ರಾಜ್ ಅವರು ನೀಡಿದ ದೂರಿನಂತೆ, ಈ ಸ್ಥಳದಲ್ಲಿರುವ ಹಳೆಯ ಮರದ ಸ್ಥಿತಿ ಕುರಿತು ಹಲವಾರು ಬಾರಿ ಸ್ಥಳೀಯರು ಬಿಬಿಎಂಪಿ ಅರಣ್ಯ ವಿಭಾಗದ ಅಧಿಕಾರಿ — ಆರ್.ಎಫ್.ಓ, ಎ.ಸಿ.ಎಫ್, ಡಿ.ಎಫ್.ಓ ಮತ್ತು ಇತರರ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಲಿಲ್ಲ. ಇದರಿಂದಾಗಿ ಈ ಅವಘಡ ಸಂಭವಿಸಿದ್ದು, ಸಂಪೂರ್ಣ ಜವಾಬ್ದಾರಿ ಸಂಬಂಧಿತ ಅಧಿಕಾರಿಗಳ ಮೇಲಿದೆ ಎಂದು ಅವರು ದೂರಿದ್ದಾರೆ.
ಈ ಸಂಬಂಧ ಹನುಮಂತನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಹಳೆಯ ಮರಗಳ ನಿರ್ವಹಣೆ ಮತ್ತು ಕಾಲಕಾಲಕ್ಕೆ ಅವುಗಳನ್ನು ಕತ್ತರಿಸಿ ಸುರಕ್ಷತೆ ಒದಗಿಸುವ ಕುರಿತಾಗಿ ಸಾರ್ವಜನಿಕರ ಮನವಿಗಳು ಕೇಳಿಬರುತ್ತಿವೆ.