ಸುದ್ದಿ 

ಮನೆಗೆ ಬೀಗ ಹಾಕಿದ್ದಾಗ ಕಳ್ಳತನ – 1.70 ಲಕ್ಷ ಮೌಲ್ಯದ ನಗದು ಹಾಗೂ ಬೆಳ್ಳಿ ವಸ್ತುಗಳ ಕಳ್ಳತನ

Taluknewsmedia.com

ಬೆಂಗಳೂರು, ಜುಲೈ 14:2025


ನಗರದ ಯಲಹಂಕದ ಬೆಳ್ಳಿಹಳ್ಳಿ ಮುಖ್ಯ ರಸ್ತೆಯಲ್ಲಿರುವ ಶ್ರೀ ಲಕ್ಷ್ಮಿ ನಿಲಯದಲ್ಲಿ ಕುಟುಂಬ ಸಮೇತ ಹೊರಗೆ ಹೋಗಿದ್ದಾಗ, ಮನೆಯಲ್ಲಿ ಬೀಗ ಹಾಕಿದ್ದುದನ್ನು ಬಹುಶಃ ಗಮನಿಸಿದ ಕಳ್ಳರು, ಗೇಟ್ ಹಾಗೂ ಬಾಗಿಲಿನ ಬೀಗವನ್ನು ಒಡೆದು ಒಳನುಗ್ಗಿ ಸುಮಾರು ₹1,70,000 ಮೌಲ್ಯದ ನಗದು ಹಾಗೂ ಬೆಳ್ಳಿ ವಸ್ತುಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ.

ಹರೀಶ ಪದ್ಮನಾಭ ಶೆಟ್ಟಿ ಅವರು ತಮ್ಮ ಕುಟುಂಬದೊಂದಿಗೆ 10 ಜುಲೈ 2025 ರಂದು ಬೆಳಿಗ್ಗೆ 11 ಗಂಟೆಗೆ ಬನಶಂಕರಿಗೆ ತೆರಳಿದ್ದರು. ಮನೆಗೆ ಬೀಗ ಹಾಕಿ ತೆರಳಿದ್ದ ಅವರು 11 ಜುಲೈ 2025 ರಂದು ಮಧ್ಯರಾತ್ರಿಯ ವೇಳೆ ಮನೆಗೆ ಹಿಂತಿರುಗಿದಾಗ ಗೇಟ್, ಬಾಗಿಲಿನ ಬೀಗಗಳು ಒಡೆಯಲಾಗಿದ್ದನ್ನು ಗಮನಿಸಿದರು. ತಕ್ಷಣವೇ ಮನೆಯೊಳಗೆ ಪರಿಶೀಲನೆ ನಡೆಸಿದಾಗ, ಮೊದಲನೆ ಬೀರುವನ್ನು ಬಲವಂತವಾಗಿ ತೆರೆದು, ಅದರಲ್ಲಿ ಇಟ್ಟಿದ್ದ ₹1,00,000 ನಗದು, ₹20,000 ಚಿಲ್ಲರೆ ಹಣ ಹಾಗೂ ಸುಮಾರು 500ಗ್ರಾಂ ತೂಕದ ಬೆಳ್ಳಿಯ ವಸ್ತುಗಳನ್ನು ಕಳ್ಳರು ಕಳವು ಮಾಡಿದ್ದನ್ನು ಕಂಡುಬಂದಿದೆ.

ಇದೇ ವೇಳೆ ಮತ್ತೊಂದು ಬೀರುವಿನ ಲಾಕ್‌ವನ್ನೂ ಕಬ್ಬಿಣದ ರಾಡ್‌ನಿಂದ ಒಡೆದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕಳ್ಳರು ಇನ್ನೂ ಏನು ಏನು ವಸ್ತುಗಳನ್ನು ಕಳವು ಮಾಡಿದ್ದಾರೆ ಎಂಬ ವಿವರವನ್ನು ಪರಿಶೀಲಿಸಿ ನಂತರದ ಹಂತದಲ್ಲಿ ಸಂಪಿಗೆಹಳ್ಳಿ ಪೊಲೀಸರಿಗೆ ತಿಳಿಸಲಾಗುವುದು ಎಂದು ದೂರಿನಲ್ಲಿ ಹೇಳಲಾಗಿದೆ.
ಸಂಪಿಗೆಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಮನೆಯಲ್ಲಿ ಬೀಗ ಹಾಕಿದ್ದಾಗಲೇ ಈ ರೀತಿಯ ಕಳ್ಳತನ ನಡೆದಿರುವುದು ಸ್ಥಳೀಯರಲ್ಲಿ ಭೀತಿಯ ಸೃಷ್ಟಿಗೆ ಕಾರಣವಾಗಿದೆ.

Related posts