ಮನೆ ಬಾಗಿಲು ಮುರಿದು ಕಳ್ಳತನ – ರೂ.1.5 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಮತ್ತು ನಗದು ಕಳವು
ಆನೇಕಲ್, ಆಗಸ್ಟ್ 5:
ದೊಮ್ಮಸಂದ್ರದಲ್ಲಿ ವ್ಯಕ್ತಿಯೊಬ್ಬರ ಮನೆಯಲ್ಲಿ ಅಡಗಿ ನುಗ್ಗಿದ ಕಳ್ಳರು, ಬಾಗಿಲು ಮತ್ತು ಬೀರುವಿನ ಲಾಕರ್ ಮುರಿದು ರೂ.1.5 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳು ಹಾಗೂ ನಗದನ್ನು ಕದ್ದೊಯ್ಯಿರುವ ಘಟನೆ ನಡೆದಿದೆ.
ವಸಂತಮ್ಮನವರು 04-08-2025 ರಂದು ಸಂಜೆ 5 ಗಂಟೆಗೆ ಆನೇಕಲ್ ಠಾಣೆಗೆ ಹಾಜರಾಗಿ ದೂರು ನೀಡಿದ್ದು, ತನ್ನ ಗಂಡ ಮೃತಪಟ್ಟಿದ್ದು ತಾನು ಒಬ್ಬಳೇ ವಾಸಿಸುತ್ತಿರುವುದಾಗಿ ತಿಳಿಸಿದ್ದಾರೆ. ಅವರ ಮಗ ನರಸಿಂಹಯ್ಯ ಎಂಬವರು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ದಿನಾಂಕ 3-08-2025 ರಂದು ರಾತ್ರಿಯಲ್ಲಿ ತಮ್ಮ ಅಕ್ಕ ಕಮಲಮ್ಮರ ಆರೋಗ್ಯ ಸರಿ ಇಲ್ಲದ ಕಾರಣದಿಂದ ಅವರು ಅವರ ಮನೆಗೆ ತೆರಳಿ ಅಲ್ಲಿ ತಂಗಿದ್ದರು. ಹೋಗುವ ಮೊದಲು ತಮ್ಮ ಮನೆ ಬಾಗಿಲನ್ನು ಲಾಕ್ ಮಾಡಿಕೊಂಡಿದ್ದರು.
ಆದರೆ ಮುಂದಿನ ದಿನ ಬೆಳಿಗ್ಗೆ 6 ಗಂಟೆಗೆ ಮನೆಗೆ ಹಿಂತಿರುಗಿದಾಗ, ಬಾಗಿಲು ಮುರಿದ ಸ್ಥಿತಿಯಲ್ಲಿ ಕಂಡುಬಂದಿತು. ಒಳಗೆ ಹೋಗಿ ಪರಿಶೀಲಿಸಿದಾಗ, ಬೀರುವಿನಲ್ಲಿದ್ದ ಬಟ್ಟೆಗಳನ್ನು ಚಿತರಿ ಹಾಕಲಾಗಿದ್ದು, ಲಾಕರ್ ಅನ್ನು ಮುರಿದು ಅದರಲ್ಲಿ ಇಟ್ಟಿದ್ದ ಚಿನ್ನದ ವಡವೆಗಳು, ಬೆಳ್ಳಿಯ ವಸ್ತುಗಳು ಹಾಗೂ ಸುಮಾರು ರೂ.1.5 ಲಕ್ಷ ನಗದು ಕದ್ದೊಯ್ಯಲಾಗಿದೆ ಎಂಬುದು ಸ್ಪಷ್ಟವಾಗಿದೆ.
ಘಟನೆಯ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರನ್ನು ಪತ್ತೆ ಹಚ್ಚಲು ತನಿಖೆ ಮುಂದುವರೆದಿದೆ.

