ಅನ್ನ ದೇವರ ಮುಂದೆಅನ್ಯ ದೇವರು ಉಂಟೆ,ಅನ್ನವಿರುವತನಕ ಪ್ರಾಣವು, ಜಗದೊಳಗನ್ನವೇ ದೈವ ಸರ್ವಜ್ಞ…
” ಅನ್ನ ದೇವರ ಮುಂದೆ
ಅನ್ಯ ದೇವರು ಉಂಟೆ,
ಅನ್ನವಿರುವತನಕ ಪ್ರಾಣವು,
ಜಗದೊಳಗನ್ನವೇ ದೈವ ಸರ್ವಜ್ಞ…….”
ವಿಶ್ವ ಆಹಾರ ದಿನದ ಸಂದರ್ಭದಲ್ಲಿ…..
ಅಕ್ಟೋಬರ್ 16…..
ಇಂದು ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಬೆಳಗ್ಗೆ ಹತ್ತು ಗಂಟೆಗೆ ಮಾನ್ಯ ಮುಖ್ಯಮಂತ್ರಿಗಳಿಂದ ರಾಜ್ಯದಲ್ಲಿ ಪ್ರಥಮ ಬಾರಿಗೆ ” ವಿಶ್ವ ಆಹಾರ ದಿನ ” ಆಚರಿಸಲಾಗುತ್ತಿದೆ.
ಆಹಾರ ಸಂರಕ್ಷಣಾ ಜಾಗೃತಿ ಅಭಿಯಾನ ಬೆಂಗಳೂರು ಮತ್ತು ಕೊಡಗಿನ ಶ್ರೀ ಎಂ. ಯುವರಾಜ್ ಮತ್ತು ಶ್ರೀ ಮೋಹನ್ ಕುಮಾರ್ ಅವರ ಸುಮಾರು ಹದಿನೈದು ವರ್ಷಗಳ ಸತತ ಪರಿಶ್ರಮದಿಂದ ಅಧಿಕೃತವಾಗಿ ಇನ್ನು ಮುಂದೆ ಪ್ರತಿವರ್ಷ ವಿಶ್ವ ಆಹಾರ ದಿನವನ್ನು ಸರ್ಕಾರ ಮಟ್ಟದಲ್ಲಿ ಆಚರಿಸಲಾಗುತ್ತದೆ ಮತ್ತು ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಅದಕ್ಕಾಗಿ ನಮಗೂ ಹೆಮ್ಮೆ ಇದೆ.
ಈ ನಿಟ್ಟಿನಲ್ಲಿ ಇಂದು ಸರ್ಕಾರದ ಅಧಿಕೃತ ಆಹ್ವಾನದ ಮೇರೆಗೆ ಆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇವೆ. ಆ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳಿಗೆ ನಾವು ಸಲ್ಲಿಸುತ್ತಿರುವ ಮನವಿ ಪತ್ರದ ಸಾರಾಂಶ
” ಆಹಾರ ನೀತಿ ಸಂಹಿತೆ – 2025 “
ಇಡೀ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಕರ್ನಾಟಕದಲ್ಲಿ ” ಆಹಾರ ನೀತಿ ಸಂಹಿತೆ ” ಜಾರಿಗೆ ಒತ್ತಾಯಿಸಿ ಆಹಾರ ಸಂರಕ್ಷಣಾ ಅಭಿಯಾನದ ವತಿಯಿಂದ ಮುಖ್ಯಮಂತ್ರಿಗಳು ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಿಗೆ ಆಗ್ರಹ ಪೂರ್ವಕ ಮನವಿ…..
ಹಸಿವು ಮುಕ್ತ ಕರ್ನಾಟಕ ಮಾಡುವ ನಿಟ್ಟಿನಲ್ಲಿ ನಿಮ್ಮ ಪ್ರಯತ್ನಗಳನ್ನು ಸ್ವಾಗತಿಸುತ್ತಾ……
ಸಾರ್ವಜನಿಕ ಸಮಾರಂಭಗಳಲ್ಲಿ ಆಹಾರ ವ್ಯರ್ಥವಾಗುವುದನ್ನು ತಡೆಯಲು ತೆಗೆದುಕೊಳ್ಳಬೇಕಾದ ಕೆಲವು ಕ್ರಮಗಳು ……..
1) ಆಹಾರ ಸಂರಕ್ಷಣೆಗಾಗಿ ಆಹಾರ ನೀತಿ ಸಂಹಿತೆಯನ್ನು ಕಡ್ಡಾಯವಾಗಿ ಕೂಡಲೇ ಜಾರಿಗೊಳಿಸಬೇಕು.
2) ಆಹಾರ ಸಂರಕ್ಷಣೆ ಕುರಿತಂತೆ ಮಕ್ಕಳಲ್ಲಿ ಅರಿವು ಮೂಡಿಸುವ ದಿಸೆಯಲ್ಲಿ ಶಾಲಾ ಪಠ್ಯದಲ್ಲಿ ಈ ವಿಷಯವನ್ನು ಅಳವಡಿಸಬೇಕು.
3) ಸಾರ್ವಜನಿಕ ಸಭೆ – ಸಮಾರಂಭಗಳಲ್ಲಿ ಆಹಾರ ಪೋಲಾಗುವುದನ್ನು ತಡೆಗಟ್ಟಲು ಜಾಗೃತಿ ಮೂಡಿಸುವುದು.
4) ವಿವಿಧ ಮಾಧ್ಯಮಗಳ ಮೂಲಕ ಸರ್ಕಾರ ನೀಡುವ ಜಾಹೀರಾತಿನಲ್ಲಿ ಆಹಾರ ಸಂರಕ್ಷಣೆ ಕುರಿತಂತೆ ಅರಿವು ಮೂಡಿಸುವುದು. ( ಧೂಮಪಾನ ಮತ್ತು ಮದ್ಯಪಾನದ ಅಪಾಯ ಕುರಿತು ಎಚ್ಚರಿಸುವಂತೆ. )
5) ಪ್ರತಿ ವರ್ಷ ಅಕ್ಟೋಬರ್ 16 ರಂದು ಸರ್ಕಾರದ ವತಿಯಿಂದ ವಿಶ್ವ ಆಹಾರ ದಿನವನ್ನು ರಾಜ್ಯ , ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಆಚರಿಸುವ ಮೂಲಕ ಆಹಾರ ಸಂರಕ್ಷಣೆ ಕುರಿತು ತಿಳಿವಳಿಕೆ ಮೂಡಿಸುವುದು.
6) ಆಹಾರ ಸಂರಕ್ಷಣೆ ಕುರಿತು ರೂಪುರೇಷೆಗಳ ಕರಡು ತಯಾರಿಕೆಗಾಗಿ ಕೃಷಿ ಮತ್ತು ಆಹಾರ ತಜ್ಞರನ್ನೊಳಗೊಂಡ ಸಮನ್ವಯ ಸಮಿತಿಯನ್ನು ರಚಿಸುವ ಮೂಲಕ ಆಹಾರ ಸಂರಕ್ಷಣೆಗೆ ವಿಶೇಷ ಒತ್ತು ನೀಡಬೇಕು.
7) ರಾಜ್ಯಾದ್ಯಂತ ಕಲ್ಯಾಣ ಮಂಟಪಗಳಲ್ಲಿ ಆಹಾರದ ಮಹತ್ವ ಸಾರುವ ಬರಹಗಳ ಫಲಕವನ್ನು ಅಳವಡಿಸಬೇಕು.
8) ರಾಜ್ಯದಾದ್ಯಂತ ಹೋಟೆಲು ಮತ್ತು ರೆಸ್ಟೋರೆಂಟ್, ಬೇಕರಿ, ಉಪಹಾರ ಮಂದಿರಗಳಲ್ಲಿ ಆಹಾರದ ಮಹತ್ವ ಸಾರುವ ಮತ್ತು ಆಹಾರ ವ್ಯರ್ಥ ಮಾಡದಿರುವ ಬಗ್ಗೆ ಫಲಕವನ್ನು ಅಳವಡಿಸಬೇಕು.
9) ಯಾವುದೇ ಮನರಂಜನಾ ಉದ್ಯಮಗಳಾದ ಧಾರವಾಹಿ, ಸಿನಿಮಾಗಳಲ್ಲಿ ಅಥವಾ ರಾಜಕೀಯ ಕಾರ್ಯಕ್ರಮಗಳಲ್ಲಿ ವ್ಯಕ್ತಿಗಳಿಗೆ ಹಾಲು , ಹಣ್ಣು ತರಕಾರಿ ಮುಂತಾದ ಆಹಾರ ಪದಾರ್ಥಗಳನ್ನು ಚೆಲ್ಲುವ, ನಾಶಮಾಡುವ ಅಥವಾ ದುರುಪಯೋಗಪಡಿಸುವುದನ್ನು ದಂಡಾರ್ಹ ಅಪರಾಧವೆಂದು ಘೋಷಿಸಬೇಕು / ನಿಷೇಧಿಸಬೇಕು.
10) ಈ ಜಾಗೃತಿಯ ಅನುಷ್ಠಾನಕ್ಕಾಗಿ ನೀತಿ ನಿಯಮಗಳನ್ನು ರೂಪಿಸಲು
” ಆಹಾರ ನೀತಿ ಸಂಹಿತೆಯ ” ಅಧ್ಯಯನ ಸಮಿತಿ ರಚಿಸಬೇಕು.
ಇದಕ್ಕೆ ಕನಿಷ್ಠ ಆರು ತಿಂಗಳ ಕಾಲಾವಧಿ ನಿಗದಿಪಡಿಸಬೇಕು.
11) ಇದರಲ್ಲಿ ಕನಿಷ್ಠ ಹತ್ತು ಜನರ ವಿಷಯ ತಜ್ಞರನ್ನು ನೇಮಿಸಬೇಕು.
ಆಹಾರ ಇಲಾಖೆಯ ಕಾರ್ಯದರ್ಶಿ,
ಕಾನೂನು ಸಲಹೆಗಾರರು,
ಆಹಾರ ಜಾಗೃತಿ ಅಭಿಯಾನದ ಇಬ್ಬರು ಸದಸ್ಯರು,
ರೈತ ಮುಖಂಡರು,
ಆಹಾರ ಸಂಶೋಧನಾ ಕೇಂದ್ರದ ನಿರ್ದೇಶಕರು,
ಅಡಿಗೆ ಗುತ್ತಿಗೆದಾರರು,
ಹೋಟೆಲ್ ಮಾಲೀಕರ ಪ್ರತಿನಿಧಿ
ಕಡ್ಡಾಯವಾಗಿ ಇರಬೇಕು…
ಈ ಅಧ್ಯಯನ ವರದಿಯನ್ನು ಪರಿಶೀಲಿಸಿ ಕಾನೂನಾತ್ಮಕ ಜಾರಿ ಮಾಡಲು ಕಾಲ ಮಿತಿಯೊಳಗೆ ಶೀಘ್ರ ಕ್ರಮ ಕೈಗೊಳ್ಳಬೇಕು….
ಇದು ಕೆಲವು ಸಲಹೆಗಳಷ್ಟೆ. ಇದಕ್ಕಿಂತ ಉತ್ತಮ ಸಲಹೆಗಳನ್ನು ಸಾರ್ವಜನಿಕರಿಂದ ಸ್ವೀಕರಿಸಿ ಜಾರಿಗೊಳಿಸಬೇಕು…..
ಇದರಿಂದಾಗಿ ಕೃಷಿ ಭೂಮಿಯ ಮೇಲಿನ ಒತ್ತಡ, ಆಹಾರದ ಹಂಚಿಕೆಯ ಮೇಲಿನ ಒತ್ತಡ, ಪೌಷ್ಟಿಕಾಂಶ ಕೊರತೆಯ ಮೇಲಿನ ಒತ್ತಡ ಕಡಿಮೆಯಾಗುತ್ತದೆ….
ಪಾಶ್ಚಾತ್ಯ ದೇಶಗಳಲ್ಲಿ ನಾಗರಿಕ ಪ್ರಜ್ಞೆಯ ಕಾರಣದಿಂದ, ಇಸ್ಲಾಮಿಕ್ ದೇಶಗಳಲ್ಲಿ ಧಾರ್ಮಿಕ ನಂಬಿಕೆಯ ಕಾರಣ, ಬೌದ್ದ ಧರ್ಮದಲ್ಲಿ ಭಿಕ್ಷಾಟನೆ ನೀತಿಯ ಕಾರಣದಿಂದ, ಲಿಂಗಾಯತ ಸಮುದಾಯದಲ್ಲಿ ಶ್ರಮದ ಅನುಭಾವದ ಕಾರಣದಿಂದ ಆಹಾರ ವ್ಯರ್ಥವಾಗುವುದು ಕಡಿಮೆ. ಅದನ್ನು ಹೊರತುಪಡಿಸಿ ಭಾರತದಲ್ಲಿ ಬಹುತೇಕ ಶ್ರೀಮಂತರ ಒಣ ಪ್ರದರ್ಶನದ ಕಾರಣ ಆಹಾರ ತಯಾರಾದ ನಂತರ ಅತ್ಯಂತ ಹೆಚ್ಚು ನಷ್ಟವಾಗುತ್ತದೆ. ಅದನ್ನು ನಾವೆಲ್ಲರೂ ಸೇರಿ ತಡೆಗಟ್ಟುವ ನಿಟ್ಟಿನಲ್ಲಿ ಪ್ರಯತ್ನಿಸೋಣ.
ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ,
ಕಳೆದ 15 ವರ್ಷಗಳಿಂದ ಈ ಬಗ್ಗೆ ಅತ್ಯಂತ ನಿಸ್ವಾರ್ಥದಿಂದ ಸೇವೆ ಸಲ್ಲಿಸುತ್ತಿರುವ,
ಎಂ. ಯುವರಾಜ್,
80508 02019
ಅವರನ್ನು ಸಂಪರ್ಕಿಸಬಹುದು…..
ಆಹಾರ ಸಂರಕ್ಷಣಾ ಜನಜಾಗೃತಿ ಅಭಿಯಾನ
ಕೊಡಗು – ಬೆಂಗಳೂರು
ಮತ್ತು
ಪ್ರಬುದ್ಧ ಸಮಾಜ ನಿರ್ಮಾಣ ವೇದಿಕೆ, ಬೆಂಗಳೂರು ಇವರಿಂದ,
ಆಹಾರ ಪೋಲು – ರಾಷ್ಟ್ರೀಯ ನಷ್ಟ,
ತಿನ್ನುವ ಹಕ್ಕಿದೆ – ಬಿಸಾಡುವ ಹಕ್ಕು ನಮಗಿಲ್ಲ
ನಮ್ಮ ನೆಲೆಯಲ್ಲಿ ಆಹಾರ ವ್ಯರ್ಥವಾಗುವುದನ್ನು ತಡೆಯುವ ಪ್ರಯತ್ನ ಮತ್ತು ಸಮಾಜಮುಖಿ ಚಿಂತನೆಯ ಆಸಕ್ತ ಗೆಳೆಯರಿಂದ ಜಾಗೃತಿ ಅಭಿಯಾನ.
ಆಹಾರದ ಉಳಿತಾಯ ಎಷ್ಟು ಅವಶ್ಯಕ ಎಂದು ನಿಮಗೆ ಹೇಳುವ ಅಗತ್ಯವಿಲ್ಲ . ಅದು ನಮ್ಮೆಲ್ಲರ ಜವಾಬ್ದಾರಿ .
RIGHT TO EAT – NOT TO WASTE
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ,
9663750451……
9844013068………

