ಜಮೀನು ದಾರಿ ವಿವಾದದಿಂದ ಹಲ್ಲೆ – ತ್ಯಾವಕನಹಳ್ಳಿಯಲ್ಲಿ ಸಂಬಂಧಿಕರ ಕೈಗಳಿಂದ ಯುವಕನಿಗೆ ಗಂಭೀರ ಗಾಯ
ತ್ಯಾವಕನಹಳ್ಳಿ, ಜುಲೈ 8, 2025: ತ್ಯಾವಕನಹಳ್ಳಿ ಗ್ರಾಮದಲ್ಲಿ ಜಮೀನಿಗೆ ದಾರಿ ವಿಚಾರವಾಗಿ ಉಂಟಾದ ಗಲಾಟೆ ಹಲ್ಲೆ ಗೆ ದಾರಿಯಾಗಿ, ವ್ಯಕ್ತಿಯೊಬ್ಬ ಆಸ್ಪತ್ರೆಗೆ ಸೇರಿಕೊಳ್ಳುವಂತಾಗಿದೆ. ಸಂಬಂಧಿಕರ ಮಧ್ಯೆ ನಡೆಯುತ್ತಿರುವ ಜಮೀನಿನ ಹಕ್ಕು ವಿವಾದ ಹಿನ್ನಲೆಯಲ್ಲಿ ಈ ದೌರ್ಜನ್ಯ ನಡೆದಿದ್ದು, ಸ್ಥಳೀಯ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆನಂದ್ ರವರು ನೀಡಿದ ಮಾಹಿತಿ ಪ್ರಕಾರ, ತ್ಯಾವಕನಹಳ್ಳಿ ಗ್ರಾಮದಲ್ಲಿನ ಸರ್ವೆ ನಂ. 217/2 ಮತ್ತು 117ಬಿ2 ಜಮೀನಿನಲ್ಲಿ ದಾರಿ ಸಂಬಂಧಿತ ವಿಚಾರವನ್ನು ಮಾನ್ಯ ನ್ಯಾಯಾಲಯದ ಮುಂದೆ ವಿಚಾರಣೆಗೆ ಇಟ್ಟಿರುವುದಾದರೂ, ಆರೋಪಿತರಾದ ದೊಡ್ಡಪ್ಪ ವೆಂಕಟಸ್ವಾಮಿ ಮತ್ತು ಆತನ ಅಳಿಯ ಗೊಪಾಲ್ ಅವರು ಈ ವಿಚಾರವಾಗಿ ಗಲಾಟೆ ಮಾಡುತ್ತಿದ್ದರು.
ದಿನಾಂಕ 23 ಜೂನ್ 2025 ರಂದು ಬೆಳಿಗ್ಗೆ 9.45ರ ಸುಮಾರಿಗೆ, ಆನಂದ್ ರವರ ಜಮೀನಿನಲ್ಲಿ ಇದ್ದಾಗ, ಆರೋಪಿಗಳು ಸ್ಥಳಕ್ಕೆ ಬಂದು, ಜಮೀನಿಗೆ ದಾರಿ ಬಿಡುವಂತೆ ಕೇಳಿದ ಮಾತಿಗೆ ಕೋಪಗೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಅಲ್ಲದೇ, ಅವರು ಆನಂದ್ ರವರ ಮೇಲೆ ಹಲ್ಲೆ ನಡೆಸಿ, ಎಳೆದುಕೊಂಡು ಹೋಗಿ, ಕುರ್ಚಿಗೆ ಕಟ್ಟಿಹಾಕಿ, ದೊಣ್ಣೆಗಳಿಂದ ತೊಡೆ ಹಾಗೂ ಕತ್ತಿನ ಭಾಗಕ್ಕೆ ಹೊಡೆದು ಗಾಯಪಡಿಸಿದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಘಟನೆಯು ನಡಿದ ನಂತರ, ತಂದೆ ಮತ್ತು ಚಿಕ್ಕಪ್ಪ ಚೌಡಪ್ಪ ಸ್ಥಳಕ್ಕೆ ಬಂದು ಅವರನ್ನು ಮುಕ್ತಗೊಳಿಸಿ ತಕ್ಷಣ ಸರ್ಜಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಯಡವನಹಳ್ಳಿಯ ಆಕ್ಸ್ಫರ್ಡ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅಸ್ವಸ್ಥತೆಯಿಂದ ಈಗಷ್ಟೇ ಚೇತರಿಸಿಕೊಂಡಿರುವುದರಿಂದ ತಡವಾಗಿ ದೂರು ನೀಡಲಾಗಿದ್ದು, ಆರೋಪಿಗಳಾದ ವೆಂಕಟಸ್ವಾಮಿ ಮತ್ತು ಗೊಪಾಲ್ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆನಂದ್ ರವರು ಮನವಿ ಮಾಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

